ದಾವಣಗೆರೆ: ಕಳೆದ ನಾಲ್ಕೈದು ದಿನಗಳಿಂದ ಎರಡು ಗ್ರಾಮಗಳ ನಡುವೆ ಜಗಳಕ್ಕೆ ಕಾರಣವಾಗಿದ್ದ ದೇವರ ಕೋಣದ ವಿಚಾರ ಈಗ ಆಣೆ ಪ್ರಮಾಣದ ಮೂಲಕ ಬಗೆ ಹರಿದಿದ್ದು, ಸ್ವಗ್ರಾಮ ಬೇಲಿಮಲ್ಲೂರುಗೆ ದೇವರ ಕೋಣ ಬಂದಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು ಗ್ರಾಮದ ಮಾರಿಕಾಂಬಾ ದೇವಿಯ ಕೋಣ ಕಾಣೆಯಾಗಿತ್ತು. ಅದೇ ಕೋಣ ಶಿವಮೊಗ್ಗದ ಹಾರ್ನಹಳ್ಳಿ ಗ್ರಾಮದಲ್ಲಿ ಕಾಣಿಸಿದ್ದು, ಆ ಕೋಣ ನಮ್ಮದೇ ಎಂದು ಹಾರ್ನಹಳ್ಳಿ ಗ್ರಾಮದವರು ಕಟ್ಟಿಹಾಕಿಕೊಂಡಿದ್ದರು. ಇದರಿಂದ ಎರಡು ಗ್ರಾಮಗಳ ನಡುವೆ ವಾಗ್ವಾದ ಶುರುವಾಗಿದ್ದು, ಕೊನೆಗೆ ಪೊಲೀಸ್ ಠಾಣೆಯ ಮಟ್ಟಿಲೇರಿ ಡಿಎನ್ಎ ಪರೀಕ್ಷೆ ಮಾಡಬೇಕು ಎನ್ನುವ ಮಟ್ಟಿಗೆ ತಲುಪಿತ್ತು.
ಆದರೆ ಹೊನ್ನಾಳಿಯ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳು ಮಧ್ಯಸ್ಥಿಕೆ ವಹಿಸಿ ಮಠದ ಶ್ರೀಗಳ ಗದ್ದಿಗೆ ಮುಂದೆ ಆಣೆ ಪ್ರಮಾಣದ ಮೂಲಕ ವಿವಾದವನ್ನು ಪರಿಹರಿಸಿದ್ದಾರೆ. ಈ ಕೋಣ ದಾವಣಗೆರೆಯ ಬೇಲಿ ಮಲ್ಲೂರು ಗ್ರಾಮದ ಮಾರಿಕಾಂಬಾ ದೇವಿಯ ಕೋಣ ಎಂದು ತಿಳಿದುಬಂದಿದೆ.
ಅದ್ದರಿಂದ ಇಂದು ಪೊಲೀಸರ ಭದ್ರತೆಯ ಮೂಲಕ ಶಿವಮೊಗ್ಗದ ಗೋಶಾಲೆಯಿಂದ ಹೊನ್ನಾಳಿಯ ಬೇಲಿಮಲ್ಲೂರು ಗ್ರಾಮಕ್ಕೆ ದೇವರ ಕೋಣ ಆಗಮಿಸಿತು. ಇನ್ನು ಶಾಸಕ ಎಂ ಪಿ ರೇಣುಕಾಚಾರ್ಯ ಹಿರೇಕಲ್ಮಠದ ಬಳಿ ಕೋಣಕ್ಕೆ ಪೊಜೆ ಸಲ್ಲಿಸಿದರು. ಇನ್ನು ಬೇಲಿಮಲ್ಲೂರು ಗ್ರಾಮಸ್ಥರು ರೇಣುಕಾಚಾರ್ಯ ರನ್ನು ಎತ್ತಿ ಕುಣಿದಾಡಿ ಹರ್ಷೋದ್ಗಾರ ವ್ಯಕ್ತಪಡಿಸಿದರು.