– ಸಂವಿಧಾನ ಬದಲಾವಣೆಗೆ ಕೈ ಹಾಕಿದ್ರೆ ರಕ್ತ ಪಾತವಾಗುತ್ತೆ
ದಾವಣಗೆರೆ: ನಮ್ಮ ಸರ್ಕಾರವು ಜನರ ಪರ ಯೋಜನೆಗಳನ್ನು ತಂದಿತ್ತು. ಆದರೂ ನಮ್ಮನ್ನ ಕೈ ಬಿಟ್ಟುಬಿಟ್ಟರಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಜನರ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ.
ಹರಿಹರದಲ್ಲಿ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದೆ. ಅದಕ್ಕಿಂತ ಮೊದಲು ಅನ್ನಭಾಗ್ಯ ಯೋಜನೆ ತೆಗೆದುಕೊಂಡು ಬಂದೆ. ಯಾರೂ ಹಸಿವಿನಿಂದ ಇರಬಾರದು ಎನ್ನುವುದು ನಮ್ಮ ಆಸೆ. ಇದು ಮಹಾತ್ಮ ಗಾಂಧಿಜೀಯವರ ಆಶಯವಾಗಿತ್ತು. ಜನರು ನಮಗೆ ಅಧಿಕಾರ ಕೊಟ್ಟಿದ್ದು ನಾವು ಬದುಕಲಿಕ್ಕೆ ಅಲ್ಲ. ಸಾರ್ವಜನಿಕರ ಕೆಲಸ ಮಾಡಲು ತಾರತಮ್ಯ ಮಾಡಬಾರದು ಎಂದರು.
ಇಂದಿರಾ ಕ್ಯಾಂಟೀನ್ಗಳನ್ನು ಮುಚ್ಚಲು ಬಿಜೆಪಿಯವರು ಪ್ಲ್ಯಾನ್ ಮಾಡಿದ್ದರು. ಯಾವುದೇ ಕಾರಣಕ್ಕೂ ಅನ್ನಭಾಗ್ಯ ನಿಲ್ಲಿಸಬಾರದು ಎಂದು ಅಧಿವೇಶನದಲ್ಲಿ ಶನಿವಾರ ಹೇಳಿದ್ದೇನೆ. ಮತ್ತೆ ಅಧಿಕಾರಕ್ಕೆ ಬಂದರೆ ಹತ್ತು ಕೆಜಿ ಅಕ್ಕಿ ಕೊಡುತ್ತೇನೆ ಅಂತ ಭರವಸೆ ಕೊಟ್ಟಿದ್ದೆ. ಹೌದಲ್ವಾ ಮಲ್ಲಿಕಾರ್ಜುನಾ, ನಾನು ನೀನು ಹೊಟ್ಟೆ ತುಂಭಾ ತಿಂದ್ರೆ ಸಾಕಾ ಎಂದು ಸಿದ್ದರಾಮಯ್ಯ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಪ್ರಶ್ನಿಸಿದರು.
ಬಡವರಿಗೆ ಯೋಜನೆ ತರದೆ ಮತ್ಯಾರಿಗೆ ಮಾಡೋದು ಹೇಳಿ. ಏನ್ ಟಾಟಾ ಬಿರ್ಲಾಗೆ ಯೋಜನೆ ರೂಪಿಸುತ್ತೀರಾ? ನಾನು ಎಲ್ಲಾ ಯೋಜನೆಗಳನ್ನು ತಂದೆ. ಎಲ್ಲಾ ಸಮುದಾಯವರಿಗೆ ಯೋಜನೆಗಳನ್ನು ನೀಡಿದೆ. ಆದರೆ ನನ್ನ ಬಗ್ಗೆ ಅಪಪ್ರಚಾರ ಮಾಡಿದರು. ಅದನ್ನೇ ನಂಬಿಬಿಟ್ರಲ್ಲ ನೀವು ಎಂದು ಜನರ ಬಳಿ ಬೇಸರ ವ್ಯಕ್ತಪಡಿಸಿದರು.
ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆ ಮಾಡಲು ಎಂದು ಕೆಲವೊಬ್ಬರು ಹೇಳುತ್ತಾರೆ. ಸಂವಿಧಾನ ಬದಲಾವಣೆಗೆ ಕೈ ಹಾಕಿದರೆ ರಕ್ತ ಪಾತವಾಗುತ್ತೆ ಎಂದು ಸಿದ್ದರಾಮಯ್ಯ ಪರೋಕ್ಷವಾಗಿ ಸಂಸದ ಅನಂತ್ಕುಮಾರ್ ಹೆಗ್ಡೆ ಅವರಿಗೆ ಎಚ್ಚರಿಕೆ ಕೊಟ್ಟರು.