ದಾವಣಗೆರೆ: ಜಿಲ್ಲೆಗೆ ಬಂದು ಧ್ವಜಾರೋಹಣ ನೆರವೇರಿಸಿ, ತುರ್ತಾಗಿ ಮರಳಿದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ನಡೆಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಜಿಲ್ಲೆಯ ಉಸ್ತುವಾರಿ ಸಚಿವರೇ ಹೀಗೆ ಮಾಡಿದರೆ ಹೇಗೆ? ಬಂದ್ಯಾ ಪುಟ್ಟಾ, ಹೋದ್ಯಾ ಪುಟ್ಟಾ ಎನ್ನುವಂತೆ ಸಚಿವರು ನಡೆದುಕೊಂಡಿದ್ದಾರೆ. ಜಿಲ್ಲೆಯ ಜವಾಬ್ದಾರಿ ಮರೆತು ತಮ್ಮ ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭೆ ಕ್ಷೇತ್ರಕ್ಕೆ ಹೋಗಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಇಂದು ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಜಿಲ್ಲೆಗೆ ಭೇಟಿ ನೀಡಿದ ಶ್ರೀನಿವಾಸ್ ಧ್ವಜಾರೋಹಣ ಕಾರ್ಯಕ್ರಮ ಮುಗಿಸಿ, ಅಲ್ಲಿಂದ ಹರಿಹರ ತಾಲೂಕು ಸಮೀಪ ಸಾರಥಿ ಗ್ರಾಮದ ಸೇತುವೆ ವೀಕ್ಷಿಸಿ ವಾಪಸ್ ಹೋಗಿದ್ದಾರೆ. ಮಳೆಯಿಂದಾಗಿ ಜಿಲ್ಲೆಯ ಜನರು ಸಂಕಷ್ಟಕ್ಕ ಸಿಲುಕಿದ್ದಾರೆ, ಇದನ್ನು ಪರಿಶೀಲನೆ ಮಾಡದೇ ಕೇವಲ ಸಾರಥಿ ಗ್ರಾಮದ ಸೇತುವೆ ವೀಕ್ಷಿಸಿ ಮರಳಿದ ಶಾಸಕರ ವಿರುದ್ಧ ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದರು.
ಹೊನ್ನಾಳಿ ತಾಲೂಕಿನಲ್ಲಿ ನೆರೆಯಿಂದ ಸಾಕಷ್ಟು ನಷ್ಟ ಸಂಭವಿಸಿದೆ. ನದಿ ಪಾತ್ರದ 50 ಕ್ಕೂ ಹೆಚ್ಚು ಮನೆ ಜಲಾವೃತಗೊಂಡಿದೆ. ಶಾಲೆ, ಸರ್ಕಾರಿ ಕಟ್ಟಡಗಳಿಗೆ ನೀರು ನುಗ್ಗಿದೆ. ನೂರಾರು ಎಕರೆ ಭತ್ತ, ಅಡಕೆ ಹಾಳಾಗಿದೆ. ಇತ್ತ ಹರಿಹರ ತಾಲೂಕಿನ ಉಕ್ಕಡಗಾತ್ರಿ ಕರಿಬಸವೇಶ್ವರ ದೇವಸ್ಥಾನವು ನಡುಗಡ್ಡೆಯಂತಾಗಿದೆ. ಹರಪನಹಳ್ಳಿ ತಾಲೂಕಿನ ನಿಟ್ಟೂರು, ನಂದ್ಯಾಲ, ಹಲುವಾಗಲು ಗ್ರಾಮಗಳಿಗೆ ಹಾಗೂ ಬೆಳೆ ಹಾನಿ ಇದ್ದ ನೂರಾರು ಎಕರೆ ಗದ್ದೆಗಳಿಗೆ ನೀರು ನುಗ್ಗಿದೆ. ಜಿಲ್ಲೆಯ ಜನರ ಸಮಸ್ಯೆಯನ್ನು ಆಲಿಸದೆ ಸಚಿವರು ತೆರಳಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv