ದಾವಣಗೆರೆ: ಲಾಕ್ಡೌನ್ ಆಗಿದ್ದೇ ಆಗಿದ್ದು, ಕುಡುಕರಿಗೆ ಎಲ್ಲಿಲ್ಲದ ತೊಂದರೆಯಾಗುತ್ತಿದೆ. ಅದರಲ್ಲೂ ಎಣ್ಣೆ ಸಿಗದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹಾಗೆಯೇ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಎಣ್ಣೆ ಸಿಗದಿದ್ದಕ್ಕೆ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ನಗರದ ಭರತ್ ಕಾಲೋನಿಯ ನಿವಾಸಿ ಮೆಕಾನಿಕ್ ಕೆಲಸ ಮಾಡುತ್ತಿದ್ದ ರವಿಚಂದ್ರ, (43) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಭಾರತ ಲಾಕ್ಡೌನ್ ಹಿನ್ನಲೆ ಬಾರ್ಗಳೆಲ್ಲ ಬಂದ್ ಆಗಿದ್ದು, ಕುಡುಕರಿಗೆ ಎಲ್ಲಿಲ್ಲದ ಕಷ್ಟವಾಗಿತ್ತು. ಕಳೆದ ಹತ್ತು ದಿನಗಳಿಂದ ಎಣ್ಣೆ ಇಲ್ಲದೆ ಪರದಾಡುತ್ತಿದ್ದ ರವಿಚಂದ್ರ ಮದ್ಯವ್ಯಸನಿಯಾಗಿದ್ದು, ಪ್ರತಿನಿತ್ಯ ಮದ್ಯ ಸೇವನೆ ಮಾಡಿಯೇ ಮನೆಗೆ ಬರುತ್ತಿದ್ದ.
ಒಂದು ದಿನ ಏನಾದ್ರು ಮದ್ಯ ಸಿಗದೇ ಇದ್ದರೆ ಹುಚ್ಚನಂತೆ ವರ್ತಿಸುತ್ತಿದ್ದ. ಹೀಗಾಗಿ ಲಾಕ್ ಡೌನ್ ಬಳಿಕ ಎಲ್ಲಾ ಕಡೆ ಎಣ್ಣೆಗಾಗಿ ಪರದಾಡಿದ್ದು, ಎಲ್ಲಿಯೂ ಸಿಗದ ಹಿನ್ನೆಲೆಯಲ್ಲಿ ಬೇಸತ್ತು ಹೋಗಿದ್ದ. ಇದರಿಂದ ನೊಂದು ಇಂದು ಬೆಳಗ್ಗಿನ ಜಾವ ನಿರ್ಜನ ಪ್ರದೇಶಕ್ಕೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ರವಿಚಂದ್ರಗೆ ಇಬ್ಬರು ಹೆಣ್ಣು ಮಕ್ಕಳಿದ್ದು, 12 ವರ್ಷದ ಗಂಡು ಮಗ ಇದ್ದಾನೆ. ಈಗ ಕುಟುಂಬದ ಆಧಾರಸ್ತಂಭವಿಲ್ಲದೆ ಬೀದಿಗೆ ಬಿದ್ದಂತಾಗಿದೆ.
ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.