ದಾವಣಗೆರೆ: ಇಡೀ ಪೊಲೀಸ್ ಇಲಾಖೆಯಲ್ಲಿಯೇ ನೀರವ ಮೌನ. ದಾವಣಗೆರೆಯ ಪೊಲೀಸ್ ಇಲಾಖೆ ಲೇಡಿ ಸಿಂಗಂ ಅಂತಲೇ ಹೆಸರಾಗಿದ್ದ 13 ವರ್ಷದ ತುಂಗಾ ಇನ್ನು ನೆನಪಷ್ಟೇ.
ಹೌದು. ತುಂಗಾಳನ್ನು ಕಳೆದುಕೊಂಡ ಸಿಬ್ಬಂದಿ ಕಂಬನಿ ಮಿಡಿಯುತ್ತಿದ್ದಾರೆ. ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಈಕೆ ನಿಸ್ಸೀಮಳಾಗಿದ್ದಳು. ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಳು. ಅದಾದ ಎರಡು ದಿನಕ್ಕೆ ಜ್ವರ ಕಾಣಿಸಿಕೊಂಡಿದ್ದು, ವೈದ್ಯರು ರಕ್ತ ಪರೀಕ್ಷೆ ಮಾಡಿಸಿದಾಗ ಡೆಂಗ್ಯೂ ದೃಢಪಟ್ಟಿತ್ತು. ಚಿಕಿತ್ಸೆ ನೀಡಿದರು. ಆದರೆ ಬಿಳಿ ರಕ್ತ ಕಣ ಕಡಿಮೆಯಾಗಿದ್ರಿಂದ ತುಂಗಾ ಇದೀಗ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಪತ್ನಿಯೊಂದಿಗೆ ಮುನಿಸು – 80 ಅಡಿ ಎತ್ತರದ ತಾಳೆ ಮರದಲ್ಲಿ 1 ತಿಂಗಳು ಕಳೆದ ವ್ಯಕ್ತಿ
ದಾವಣಗೆರೆ ಪೊಲೀಸ್ ಇಲಾಖೆಯಲ್ಲಿ 12 ವರ್ಷಗಳ ಕಾಲ ತುಂಗಾ ಸೇವೆ ಸಲ್ಲಿಸಿದ್ದಾಳೆ. 71 ಕೊಲೆ ಪ್ರಕರಣಗಳು, 35 ಕಳ್ಳತನ ಹಾಗೂ ದರೋಡೆ ಪ್ರಕರಣಗಳನ್ನು ಭೇದಿಸಿದ್ದಾಳೆ. ಪೊಲೀಸರಿಗೆ ತಲೆನೋವಾಗಿದ್ದ ಪ್ರಕರಣಗಳನ್ನು ಕೂಡ ತುಂಗಾ ಕಂಡುಹಿಡಿದಿದ್ದಳು. ಅಪರಾಧಿಗಳ ವಾಸನೆ ಹಿಡಿದು 13 ಕಿಲೋ ಮೀಟರ್ ಕ್ರಮಿಸಿ ಅಪರಾಧಿಗಳನ್ನು ಹಿಡಿದ ಕೀರ್ತಿ ತುಂಗಾಗಿದೆ.
ಅಗಲಿದ ತುಂಗಾಳಿಗೆ ಜಿಲ್ಲಾ ಡಿಎಆರ್ ಗ್ರೌಂಡ್ನಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಎಸ್ಪಿ ಸಿ.ಬಿ ರಿಷ್ಯಂತ್ ಸೇರಿದಂತೆ ಹಲವು ಅಧಿಕಾರಿಗಳು ಅಂತಿಮ ದರ್ಶನ ಪಡೆದು ಗೌರವ ಸಮರ್ಪಿಸಿದ್ರು. ತುಂಗಾಳ ಅಗಲಿಕೆಯಿಂದ ಪೊಲೀಸ್ ಇಲಾಖೆ ಕಂಬನಿ ಮಿಡಿದಿದ್ದು, ಚಾಣಾಕ್ಷ ತನದಿಂದ ಪ್ರಕರಣಗಳನ್ನು ಭೇದಿಸುತ್ತಿದ್ದ ಶ್ವಾನ ಇನ್ನು ನೆನಪು ಮಾತ್ರ.