ದಾವಣಗೆರೆ: ಎಲ್ಲವೂ ಅಂದು ಕೊಂಡಂತೆ ನಡೆದಿದ್ದರೆ ನವದಂಪತಿ ಇಂದು ಕುಟುಂಬಸ್ಥರೊಂದಿಗೆ ಸಂತಸದಿಂದ ಸಮಯ ಕಳೆಯಬೇಕಿತ್ತು. ಆದರೆ ವಿಧಿಯ ಆಟಕ್ಕೆ ನಿನ್ನೆಯಷ್ಟೇ ಮದುವೆಯಾದ ಮದುಮಗ ಕಾರಿನಲ್ಲಿ ತೆರಳುವ ವೇಳೆ ನಾಯಿಯನ್ನು ತಪ್ಪಿಸಲು ಹೋಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಲಕ್ಕಂಪುರ ಗ್ರಾಮದ ಬಳಿ ನಡೆದಿದೆ.
ಶಾಂತೇಶ್ (36) ಸಾವನ್ನಪ್ಪಿದ ನವ ಮದುಮಗ. ಭಾನುವಾರಷ್ಟೇ ಹೊಸಕರೆ ಗ್ರಾಮದಲ್ಲಿ ಶಾಂತೇಶ್ ಹಾಗೂ ರಶ್ಮಿ ಮದುವೆ ನಡೆದಿತ್ತು. ಇಂದು ವಧುವಿನ ತವರು ಮನೆಗೆ ಹೋಗುವಾಗ ಈ ದುರ್ಘಟನೆ ನಡೆದಿದೆ.
ಕಾರಿನಲ್ಲಿ ಆರು ಜನ ಪ್ರಯಾಣಿಸುತ್ತಿರುವಾಗ ಇದಕ್ಕಿದ ಹಾಗೇ ನಾಯಿಯೊಂದು ಕಾರಿಗೆ ಅಡ್ಡ ಬಂದಿದ್ದು, ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದ ಶಾಂತೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ವಧು ಸೇರಿ ಐವರಿಗೆ ಗಂಭೀರ ಗಾಯಗೊಂಡಿದ್ದು. ಗಾಯಗೊಂಡವರನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ಕುರಿತು ಮಾಹಿತಿ ಪಡೆದ ಜಗಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿದ್ದಾರೆ.