ದಾವಣಗೆರೆ: ನಾನು ಯಾರಿಗೂ ಹೆದರುವುದಿಲ್ಲ. ಪಕ್ಷಕ್ಕೆ ನನ್ನಿಂದ ಡ್ಯಾಮೇಜ್ ಆಗಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ನಿಂದ ಯಾವುದೇ ಸೂಚನೆ ಬಂದಿಲ್ಲ. ನಾನೇನೂ ತಪ್ಪೇ ಮಾಡಿಲ್ಲ. ವಾಸ್ತವ ಮಾತನಾಡಿದ್ದೇನೆ ಅಷ್ಟೇ. ನನಗ್ಯಾಕೆ ಸೂಚನೆ ಬರುತ್ತದೆ. ನನ್ನ ಹೇಳಿಕೆಯಿಂದ ಯಾವುದೇ ಹಾನಿಯಾಗಿಲ್ಲ ಎಂದರು.
ಪಕ್ಷಕ್ಕೆ ಹಾಗೂ ಸಿಎಂ ಯಡಿಯೂರಪ್ಪ ಅವರಿಗೆ ಮುಜುಗರ ತರಬಾರದು ಎಂಬ ಕಾರಣಕ್ಕೆ ಸಚಿವ ಸ್ಥಾನದ ಬಗ್ಗೆ ಹೆಚ್ಚು ಮಾತನಾಡಿಲ್ಲ. ಈ ಬಗ್ಗೆ ಹೇಳಿಕೆ ಕೊಟ್ಟು ಅಪಹಾಸ್ಯಕ್ಕೆ ಒಳಗಾಗಲು ಇಷ್ಟಪಡುವುದಿಲ್ಲ. ಮಾತೇ ಸಾಧನೆ ಆಗಬಾರದು. ಸಾಧನೆ ಮಾತಾಗಬೇಕು ಎಂದು ತಿಳಿಸಿದರು.
ರಾಜಕಾರಣದಲ್ಲಿ ಮಹತ್ವಾಕಾಂಕ್ಷೆ ಹೊಂದಿದ್ದೇನೆ. ರಾಜಕೀಯದಲ್ಲಿ ನಾನಿನ್ನು ಚಿಕ್ಕವನು. ಮಾಧ್ಯಮದಲ್ಲಿ ಹೇಳಿದಾಕ್ಷಣ ಸಿಎಂ ಆಗಲು, ಪ್ರಧಾನಿ ಆಗಲು ಸಾಧ್ಯವಿಲ್ಲ. ನಾನು ಆಕಾಶಕ್ಕೆ ಏಣಿ ಹಾಕುವ ವ್ಯಕ್ತಿ ಅಲ್ಲ. ನಾನಿನ್ನು ಕಲಿಯುವುದು ಬಹಳಷ್ಟಿದೆ. ಮುಂದೆ ಅವಕಾಶ ಸಿಗಬಹುದೆಂಬ ವಿಶ್ವಾಸ ಇದೆ. ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆ ಜಿಲ್ಲೆಗೆ ಮಂತ್ರಿ ಸ್ಥಾನ ನೀಡುವ ಬಗ್ಗೆ ಸಿಎಂ ಯಡಿಯೂರಪ್ಪ ನಿರ್ಧರಿಸಲಿದ್ದಾರೆ ಎಂದು ಹೇಳುವ ಮೂಲಕ ಅಚ್ಚರಿಮೂಡಿಸಿದರು.
ಕುದುರೆ ಏರುವುದು ಗೊತ್ತು, ಆಡಳಿತ ನಡೆಸುವುದು ಗೊತ್ತು. ಹೊನ್ನಾಳಿ, ನ್ಯಾಮತಿ ಜನ ಗೆಲ್ಲಿಸಿರುವುದು ಅಭಿವೃದ್ಧಿ ಕೆಲಸ ಮಾಡಲು. ರಾಜಕಾರಣ ಮಾಡಲು ಅಲ್ಲ. ಗಾಂಭೀರ್ಯದಿಂದ ಇರುತ್ತೇನೆ. ಮುಜುಗರ ತರಬಾರದು ಎಂಬ ಕಾರಣಕ್ಕೆ ಏನನ್ನೂ ಮಾತನಾಡಲ್ಲ. ಹೊನ್ನಾಳಿ ಕೇಂದ್ರಬಿಂದು ಪ್ರದೇಶ. ಹಾಗಾಗಿ ಅವಕಾಶ ಕೊಡಬೇಕು ಎಂಬುದಷ್ಟೇ ಅಭಿಪ್ರಾಯ. ಬಿಜೆಪಿಯ ಹಿರಿಯ ಶಾಸಕರು ನಾಲ್ಕು ಗೋಡೆಗಳ ಮಧ್ಯೆ ಮಾತನಾಡಬೇಕು ಎಂದು ರೇಣುಕಾಚಾರ್ಯ ಸ್ವಪಕ್ಷೀಯರಿಗೆ ಕಿವಿಮಾತು ಹೇಳಿದರು.