ದಾವಣಗೆರೆ: ಸೀಮಂತ ಕಾರ್ಯಕ್ರಮದ ಮೂಲಕ ಜಾಗೃತಿಗೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮುಂದಾಗಿದ್ದಾರೆ.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಬಂದಾಗಿನಿಂದ ಒಂದಿಲ್ಲೊಂದು ವಿಶೇಷ ಕಾರ್ಯಕ್ರಮ ಮಾಡುತ್ತಲೇ ಇದ್ದಾರೆ. ಅನಿರೀಕ್ಷಿತವಾಗಿ ಕಚೇರಿಗೆ ಭೇಟಿ ನೀಡುವುದು. ಸಾರ್ವಜನಿಕರ ಸಮಸ್ಯೆ ಆಲಿಸುವುದು, ಇದರ ಮುಂದುವರೆದ ಭಾಗವೇ ಸೀಮಂತ ಕಾರ್ಯ. ವಿಶೇಷವಾಗಿ ತವರು ಮನೆ ಮತ್ತು ಪತಿಯ ಮನೆಯ ಬಂಧು ಬಾಂಧವರು ಸೇರಿ ಖಾಸಗಿಯಾಗಿ ನಡೆಯುವ ಸೀಮಂತ ಕಾರ್ಯಕ್ಕೆ ಸರ್ಕಾರವೇ ವೇದಿಕೆ ಕಲ್ಪಿಸಿತ್ತು.
ಸೀಮಂತ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳಿಗೆ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಜಾಗೃತಿ ಮೂಡಿಸಲಾಯ್ತು. ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಂಡ ಗರ್ಭಿಣಿಯರಿಗೆ ಜಿಲ್ಲಾಧಿಕಾರಿಗಳೇ ನಿಂತು ಸೀಮಂತ ನೆರೆವೇರಿಸಿದ್ದರು. ಮನೆಗಳಲ್ಲಿ ಹಿರಿಯರು ಇಲ್ಲದೇ ಇರುವ ಗರ್ಭಿಣಿಯರಿಗೆ ಹೀಗೆ ಸರ್ಕಾರದಿಂದ ಸೀಮಂತ ಮಾಡಿದ್ದು ಖುಷಿ ತಂದಿದೆ. ನೂರಾರು ಗರ್ಭಿಣಿಯರಿಗೆ ಸೀಮಂತ ಮಾಡುತ್ತಿರುವುದು ಆತ್ಯಂತ ಸಂತೋಷದಾಯಕವಾಗಿದೆ. ಅಲ್ಲದೇ ಮಕ್ಕಳಿಗೆ ಯಾವ ರೀತಿಯ ಪೌಷ್ಠಿಕ ಆಹಾರ ನೀಡಬೇಕು ಎನ್ನುವುದನ್ನು ಇದರಿಂದ ತಿಳಿದುಕೊಳ್ಳಲು ಸಹಾಯಕವಾಗುತ್ತದೆ ಎಂದು ದಾವಣಗೆರೆ ನಿವಾಸಿ ಮೇಘಾ ಹೇಳುತ್ತಾರೆ.
ರಾಜ್ಯದಲ್ಲಿಯೇ ಇದೊಂದು ವಿಶೇಷ ಕಾರ್ಯಕ್ರಮ. ಭಾವನಾತ್ಮಕವಾಗಿ ಮಹಿಳೆಯರನ ತಮ್ಮತ್ತ ಸೆಳೆದುಕೊಂಡು, ಅವರಿಗೆ ತಿಳುವಳಿಕೆ ಹೇಳಿ ಸರ್ಕಾರದ ಯೋಜನೆ ಅನುಷ್ಠಾನಕ್ಕೆ ತರುವ ಹೊಸ ಪ್ಲಾನ್ ಇದಾಗಿದೆ. ನೂರಾರು ಮಹಿಳೆಯರಿಗೆ ಸರ್ಕಾರವೇ ತವರು ಮನೆಯ ಸ್ಥಾನದಲ್ಲಿ ಸೀಮಂತ ಮಾಡಿದ್ದು ಮಾತ್ರ ವಿಶೇಷವಾಗಿತ್ತು.