ಮಂಡ್ಯ: ಆಸ್ತಿ ಆಸೆಗಾಗಿ ವೃದ್ಧ ತಾಯಿ ಮತ್ತು ತಂಗಿಯನ್ನು ಸ್ವಂತ ಮಗಳೇ ಗೃಹ ಬಂಧನದಲ್ಲಿರಿಸಿರುವ ಅಮಾನವೀಯ ಘಟನೆ ಮಂಡ್ಯ ನಗರದ ಹೌಸಿಂಗ್ಬೋರ್ಡ್ನಲ್ಲಿ ನಡೆದಿದೆ.
ತಾಯಿ ಸುನಂದಮ್ಮ ಮತ್ತು ತಂಗಿ ರಮ್ಯಾ ಅವರನ್ನು ಕೂಡಿ ಹಾಕಿ ಹಿರಿಯ ಮಗಳು ಗೀತಾ ಮತ್ತು ಅಳಿಯ ನಾಗರಾಜು ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಸುನಂದಮ್ಮ ಅವರ ಪತಿ ಚನ್ನೇಗೌಡ ಸರ್ಕಾರಿ ಕೆಲಸದಲ್ಲಿದ್ದು ನಿವೃತ್ತರಾದ ನಂತರ ಮರಣ ಹೊಂದಿದ್ರು. ಪತಿ ಚನ್ನೇಗೌಡ ಅವರು ಸ್ವಯಾರ್ಜಿತವಾಗಿ ದುಡಿದು ಕಟ್ಟಿದ ಮನೆಯಲ್ಲಿ ಸನಂದಮ್ಮ ಮತ್ತು ಎರಡನೇ ಮಗಳು ಸೌಮ್ಯ ವಾಸವಾಗಿದ್ರು.
ಮಂಡ್ಯ ನಗರದಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮನೆಯ ಮೇಲೆ ಕಣ್ಣು ಹಾಕಿದ ಹಿರಿಯ ಮಗಳು ಗೀತಾ ಮತ್ತು ಅಳಿಯ ನಾಗರಾಜು, ಮನೆಯನ್ನು ತಮ್ಮ ಹೆಸರಿಗೆ ಬರೆದು ಕೊಡುವಂತೆ ಸುನಂದಮ್ಮನಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.
ವರದಕ್ಷಿಣೆ, ನಿವೇಶನ, ಚಿನ್ನಾಭರಣ ಕೊಟ್ಟು ಮದುವೆ ಮಾಡಿದ್ರೂ ಕೂಡ ಹಿರಿಯ ಮಗಳು ಮತ್ತು ಅಳಿಯ ಆಸ್ತಿಗಾಗಿ ಪದೇ ಪದೇ ಕಿರುಕುಳ ನೀಡುತ್ತಿರುವುದರಿಂದ ನೊಂದ ಸುನಂದಮ್ಮ, ಮಂಡ್ಯ ನಗರದಲ್ಲಿರುವ ಮನೆ ಕೊಡಲು ನಿರಾಕರಿಸಿದ್ದರು. ಇದ್ರಿಂದ ಕುಪಿತರಾಗಿ ಗೀತಾ ಮತ್ತು ನಾಗರಾಜು, ಸುನಂದಮ್ಮ ಅವರನ್ನು ಗೃಹಬಂಧನದಲ್ಲಿರಿಸಿದ್ದಾರೆ.
ಇಂದು ಬೆಳಗ್ಗೆ ಮನೆಯಿಂದ ಜೋರಾಗಿ ಕೂಗುತ್ತಿರುವ ಶಬ್ದ ಕೇಳಿ ಸ್ಥಳಕ್ಕಾಗಮಿಸಿದ ಅಕ್ಕಪಕ್ಕದ ಮನೆಯವರು, ಕೂಡಲೇ ವೃದ್ಧ ತಾಯಿ ಮತ್ತು ಕಿರಿಯ ಮಗಳಿಗೆ ರಕ್ಷಣೆ ನೀಡಿ, ಹಿಂಸೆ ನೀಡುತ್ತಿರುವ ಅಳಿಯ-ಮಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಗಲಾಟೆ ಶುರುವಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಮಗಳು, ನಾವೇನು ಕೂಡಿ ಹಾಕಿಲ್ಲ. ಅವರೇ ಒಳಗಿನಿಂದ ಬೀಗ ಹಾಕಿಕೊಂಡು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.