ಚಿಕ್ಕಮಗಳೂರು: ತಂದೆ ಮರಣ ಹೊಂದಿದ ತಿಂಗಳ ಬಳಿಕ ಮಗಳು ಕೂಡ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸೌತಿಕೆರೆ ಗ್ರಾಮದಲ್ಲಿ ನಡೆದಿದೆ.
ಸ್ಪಂದನಾ(18) ಮೃತ ಮಗಳು. ಈಕೆ ಎನ್.ಆರ್.ಪುರದಲ್ಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಪ್ರತಿ ದಿನ ಅಕ್ಕ-ತಂಗಿ ಇಬ್ಬರೂ ಒಟ್ಟಿಗೆ ಕಾಲೇಜಿಗೆ ಹೋಗಿ ಬರುತ್ತಿದ್ದರು. ಆದರೆ ಸ್ಪಂದನಾ ತಂಗಿ ಚಂದನಾ ಮಧ್ಯಾಹ್ನ ಒಂದು ಗಂಟೆಗೆ ಕಾಲೇಜಿನಿಂದ ಬಂದರೂ ಸ್ಪಂದನಾ ಬಂದಿರಲಿಲ್ಲ. ತಾಯಿ ಮಂಜುಳಾ ಕೇಳಿದ್ದಕ್ಕೆ ನನಗೆ ಸ್ಪೆಷಲ್ ಕ್ಲಾಸ್ ಇದೆ. ನೀನು ಹೋಗು ಎಂದು ಕಳಿಸಿದಳು ಎಂದು ಹೇಳಿದ್ದಾಳೆ.
ಸಂಜೆ ನಾಲ್ಕು ಗಂಟೆಯಾದರೂ ಸ್ಪಂದನಾ ಮನೆಗೆ ಬಂದಿರಲಿಲ್ಲ. ಫೋನ್ ಮಾಡಿದರೆ ನಾಟ್ ರೀಚಬಲ್. ಗಾಬರಿಗೊಂಡ ತಾಯಿ ಕಾಲೇಜು ಬಳಿ ಬಂದು ಕೇಳಿದ್ದಾಳೆ. ಕ್ಲಾಸ್ ಮುಗಿಸಿಕೊಂಡು ಹೋಗಿದ್ದಾಳೆ ಎಂದು ಹೇಳಿದ್ದಾರೆ. ಗಾಬರಿಯಿಂದ ತಾಯಿ ಸ್ನೇಹಿತರು, ಸಂಬಂಧಿಕರು, ಅಕ್ಕ-ಪಕ್ಕದವರಿಗೆ ಕೇಳಿದ್ದಾಳೆ. ಆದರೆ ಎಲ್ಲೂ ಸ್ಪಂದನಾಳ ಮಾಹಿತಿ ಸಿಗಲಿಲ್ಲ. ಮಗಳನ್ನ ಹುಡುಕಿಕೊಂಡು ಎನ್.ಆರ್.ಪುರ ಭದ್ರಾ ಹಿನ್ನೀರಿನ ಬಳಿಯೂ ಬಂದಿದ್ದಾಳೆ. ಆಗ ಅಲ್ಲಿ ಜನ ಸೇರಿದ್ದನ್ನ ನೋಡಿ ಹೋದಾಗ ಭದ್ರಾ ಹಿನ್ನೀರಿನಲ್ಲಿ ಮಗಳ ಶವ ತೇಲುತ್ತಿದ್ದನ್ನ ಕಂಡು ಕಣ್ಣೀರಿಟ್ಟು ಗೋಳಾಡಿದ್ದಾರೆ. ತಾನೇ ಎನ್.ಆರ್.ಪುರ ಠಾಣೆಗೆ ಬಂದು ದೂರು ನೀಡಿದ್ದಾರೆ.
ನನ್ನ ಗಂಡ ಮಂಜುನಾಥ್ ಕಳೆದ ನಾಲ್ಕು ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಅಂದಿನಿಂದಲೂ ನನ್ನ ಕೊನೆ ಮಗಳು ತುಂಬಾ ಮನನೊಂದು ಯಾವಾಗಲೂ ನೋವಿನಿಂದ ಇರುತ್ತಿದ್ದಳು. ನಾವೆಲ್ಲಾ ಅವಳಿಗೆ ಧೈರ್ಯ ತುಂಬಿದರೂ ಆಕೆ ಸಮಾಧಾನ ಆಗಿರಲಿಲ್ಲ. ಆದರೆ ಕಾಲೇಜಿಗೆ ಹೋಗಿ ಮನೆಗೆ ಬರದೆ ಭದ್ರಾ ಹಿನ್ನೀರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ದೂರು ನೀಡಿದ್ದಾರೆ.
ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.