ಚಿಕ್ಕಮಗಳೂರು: ಮುಳ್ಳಯ್ಯನಗಿರಿ (Mullayanagiri) ಭಾಗದ ದತ್ತಪೀಠದಲ್ಲಿ (Dattapeeta) ದತ್ತಜಯಂತಿ (Dattajayanti) ಪ್ರಯುಕ್ತ ಡಿ.11 ರಿಂದ 14ರ ವರೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಡಿ.11 ರ ಬೆಳಗ್ಗೆ 6 ಗಂಟೆಯಿಂದ ಡಿ.15ರ ಬೆಳಗ್ಗೆ 10 ಗಂಟೆವರೆಗೂ ಜಿಲ್ಲಾಡಳಿತ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದೆ. ಈ ನಾಲ್ಕು ದಿನಗಳ ಕಾಲ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಾಧಾರ ಸೇರಿದಂತೆ ಪಶ್ಚಿಮ ಘಟ್ಟಗಳ ಸಾಲಿನ ಎಲ್ಲಾ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ಸಂಪೂರ್ಣ ನಿರ್ಬಂಧ ಹೇರಿದೆ.
ದತ್ತಪೀಠದಲ್ಲಿ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ 9 ದಿನಗಳ ಕಾಲ ದತ್ತಜಯಂತಿ ನಡೆಯಲಿದೆ. ಅದರಲ್ಲಿ 12-13-14 ಈ ಮೂರು ದಿನಗಳು ಸೂಕ್ಷ್ಮ ದಿನಗಳು. ಈ ಮೂರು ದಿನವೂ ದತ್ತಪೀಠದಲ್ಲಿ ನಾನಾ ಕಾರ್ಯಕ್ರಮಗಳು ನಡೆಯಲಿವೆ. ಹಾಗಾಗಿ, ಮುಂಜಾಗೃತ ಕ್ರಮವಾಗಿ ಪ್ರವಾಸಿಗರ ವಾಹನ ಹಾಗೂ ದತ್ತ ಮಾಲಾಧಾರಿಗಳ ವಾಹನಗಳಿಂದ ಟ್ರಾಫಿಕ್ ಜಾಮ್ ಆಗಿ ಸಮಸ್ಯೆ ಆಗಬಾರದು. ಅಲ್ಲದೇ ಭದ್ರತೆಯ ದೃಷ್ಠಿಯಿಂದ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.
ಡಿ.12ರಂದು ಸಾವಿರಾರು ಮಹಿಳೆಯರು ನಗರದಲ್ಲಿ ಅನುಸೂಯ ಜಯಂತಿ, ದತ್ತಪೀಠದಲ್ಲಿ ಹೋಮ-ಹವನ ಮಾಡಲಿದ್ದಾರೆ. 13ರಂದು ಚಿಕ್ಕಮಗಳೂರು ನಗರದಲ್ಲಿ ದತ್ತಭಕ್ತರು ಹಾಗೂ ಸಾರ್ವಜನಿಕರು ಸೇರಿ 20,000ಕ್ಕೂ ಅಧಿಕ ಭಕ್ತರು ಬೃಹತ್ ಶೋಭಾಯಾತ್ರೆ ನಡೆಸಲಿದ್ದಾರೆ. 14ರಂದು ರಾಜ್ಯದ ವಿವಿಧ ಭಾಗಗಳಿಂದ ಬರುವಂತಹ 25,000ಕ್ಕೂ ಅಧಿಕ ದತ್ತ ಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಕಾರ್ಯಕ್ರಮ ಮುಗಿಯುವ ವರೆಗೂ 5,000ಕ್ಕೂ ಅಧಿಕ ಪೊಲೀಸರು ದತ್ತಪೀಠ ಸೇರಿ ಜಿಲ್ಲಾದ್ಯಂತ ಹದ್ದಿನ ಕಣ್ಣಿಡಲಿದ್ದಾರೆ.
ಡಿ.15ರ ಭಾನುವಾರ ಬೆಳಗ್ಗೆ 10 ಗಂಟೆ ಬಳಿಕ ಮುಳ್ಳಯ್ಯನಗಿರಿ ಪ್ರವಾಸಿಗರಿಗೆ ಮುಕ್ತವಾಗಲಿದೆ.