ಮಂಡ್ಯ: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಎಂದರೆ ಜನರಿಗೆ ಥಟ್ ಎಂದು ನೆನಪಿಗೆ ಬರುವುದು ಆನೆಗಳು. ಅಂಬಾರಿ ಹೊರುವ ಅರ್ಜುನನ್ನು ಕಂಡರೆ ಜನರು ಎಷ್ಟು ಆಕರ್ಷಿತಗೊಳ್ಳುತ್ತಾರೋ ಅಷ್ಟೇ ಪ್ರಮಾಣದಲ್ಲಿ ಜಂಬೂ ಸವಾರಿ ಟ್ರೂಫ್ನಲ್ಲಿರುವ ಮತ್ತೊಂದು ಆನೆ ವಿಕ್ರಮ ಅಂದರೆ ಜನರಿಗೆ ಅಚ್ಚು-ಮೆಚ್ಚು. ಜನರ ಮೆಚ್ಚಿನ ಆನೆ ವಿಕ್ರಮನಿಗೆ ಮದವೇರಿರುವ ಕಾರಣ ಈ ಬಾರಿ ಜಂಬೂ ಸವಾರಿ ಮೆರವಣಿಗೆಯಿಂದ ಔಟ್ ಆಗಿದ್ದಾನೆ.
ಕಳೆದ ಐದು ವರ್ಷಗಳಿಂದ ಸತತವಾಗಿ ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಜರುಗುವ ಖಾಸಗಿ ದರ್ಬಾರ್ನ ಪೂಜಾ ವಿಧಿ ವಿಧಾನಗಳಲ್ಲಿ ಪಟ್ಟದ ಆನೆಯಾಗಿ ಜವಾಬ್ದಾರಿ ಹೊತ್ತಿದ್ದ ವಿಕ್ರಮ ಆನೆಗೆ ಇದೀಗ ಮದವೇರಿರುವ ಕಾರಣ ಈ ಬಾರಿಯ ದಸರಾ ಮಹೋತ್ಸವದ ಕಾರ್ಯಕ್ರಮದಿಂದ ದೂರ ಉಳಿಸಲಾಗಿದೆ. ವಿಕ್ರಮನ ಬದಲಿಗೆ ಗೋಪಾಲಸ್ವಾಮಿ ಆನೆಗೆ ಪಟ್ಟದ ಆನೆಯ ಸ್ಥಾನವನ್ನು ಈ ಬಾರಿ ನೀಡಲಾಗಿದೆ. 58 ವರ್ಷದ ವಿಕ್ರಮ ಶರೀರದ ಎತ್ತರ 2.89 ಮೀಟರ್ ಇದ್ದು, 3.43 ಮೀಟರ್ ಉದ್ದ, 3,820 ಕೆ.ಜಿ ತೂಕವಿರುವ ವಿಕ್ರಮ ಕಳೆದ 18 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದ್ದಾನೆ. ಇಲ್ಲಿಯವರೆಗೆ ಬಹಳ ಸೌಮ್ಯ ಸ್ವಭಾವದ ಆನೆ ಎಂಬ ಹೆಗ್ಗಳಿಕೆ ಹೊಂದಿದ್ದ ವಿಕ್ರಮನಿಗೆ ಇದೀಗ ಮದವೇರಿರುವ ಕಾರಣ ಬಹಳ ಕೋಪದಿಂದ ವರ್ತನೆ ಮಾಡುತ್ತಿದ್ದಾನೆ. ಈ ಮದ ಇಳಿಯಬೇಕು ಎಂದರೆ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಬೇಕು. ಹೀಗಾಗಿ ಇವನನ್ನು ಪ್ರತ್ಯೇಕವಾಗಿ ಅರಮನೆಯ ಆವರಣದಲ್ಲಿ ಕಟ್ಟಿಹಾಕಲಾಗಿದೆ. ಇದನ್ನೂ ಓದಿ: ಮನೆ ಮೇಲೆ ಕಲ್ಲು ತೂರಿರುವುದು ರಾಜಕೀಯ ಪ್ರೇರಿತವಲ್ಲ: ಪುಟ್ಟರಾಜು ಸ್ಪಷ್ಟನೆ
ದಸರಾ ಆನೆಗಳಲ್ಲಿ ಅಂಬಾರಿ ಆನೆ ಹೊರತುಪಡಿಸಿದರೆ, ಪಟ್ಟದ ಆನೆಯ ಪಾತ್ರ ಬಹುಮುಖ್ಯ. ಈ ಹಿನ್ನೆಲೆಯಲ್ಲಿ ಪಟ್ಟದ ಆನೆಯಾಗಿ ಸೌಮ್ಯ ಸ್ವಭಾವದ ಆನೆಯನ್ನೇ ಆಯ್ಕೆ ಮಾಡಲಾಗುತ್ತದೆ. ಈ ಹಿಂದೆ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕೆ.ಗುಡಿ ಆನೆ ಶಿಬಿರದಲ್ಲಿನ ಗಜೇಂದ್ರ ಆನೆ ಪಟ್ಟದ ಆನೆಯಾಗಿ ಜವಾಬ್ದಾರಿ ನಿಭಾಯಿಸುತ್ತಿತ್ತು. ಗಜೇಂದ್ರನಿಗೆ ಮದವೇರಿ ದಸರಾ ಆನೆ ಶ್ರೀರಾಮ ಹಾಗೂ ಮಾವುತ ಗಣಪತಿಯನ್ನು ಕೊಂದ ಹಿನ್ನೆಲೆ ಹಾಗೂ ಹೊಸ ಮಾವುತ ಶಂಕರ್ ಅನಾರೋಗ್ಯದಿಂದ ಮೃತಪಟ್ಟ ಕಾರಣ ಗಜೇಂದ್ರ ದಸರಾ ಮಹೋತ್ಸವದಿಂದ ದೂರವುಳಿಯ ಬೇಕಾಯಿತು.
ಗಜೇಂದ್ರನಿಂದ ತೆರವಾದ ಪಟ್ಟದ ಆನೆ ಸ್ಥಾನವನ್ನು 2015ರಿಂದಲೂ ವಿಕ್ರಮ ನಿಭಾಯಿಸುತ್ತಿದ್ದು, ತನ್ನ ಸೌಮ್ಯ ಸ್ವಭಾವದಿಂದಲೇ ಮನ್ನಣೆಗಳಿಸಿದೆ. ಮದ ಇದ್ದರೂ ವರ್ತನೆಯಲ್ಲಿ ಯಾವುದೇ ಬದಲಾವಣೆಯಿಲ್ಲದೆ, ಸಾಮಾನ್ಯ ಸ್ಥಿತಿಯಲ್ಲಿರುವಂತೆ ವರ್ತಿಸುತ್ತಿದೆ. ಇದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರವಲ್ಲದೆ, ಪಶುವೈದ್ಯರು, ಮಾವುತ, ಕಾವಾಡಿಗಳಿಗೂ ಸಮಾಧಾನವನ್ನುಂಟು ಮಾಡಿದೆ. ವಿಕ್ರಮನಿಗೆ ಅತ್ಯಂತ ಸಣ್ಣ ಪ್ರಮಾಣದಲ್ಲಿ ಮದ ಇರುವುದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಮಾವುತರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಉಚಿತವಾಗಿ 120 ದಿನಗಳಲ್ಲಿ 25 ಸಾವಿರ ಮಂದಿಗೆ ಕೋವಿಡ್ ಲಸಿಕೆ- ಶ್ರೀರಾಮ ಸೇವಾ ಮಂಡಳಿ
ವಿಕ್ರಮನಿಗೆ ಸದ್ಯ ಸ್ಪಲ್ಪ ಪ್ರಮಾಣದಲ್ಲಿ ಮದ ಇದ್ದರು ಕಾರಣ ಗಂಡಾನೆ ಹತ್ತಿರ ಬಂದಾಗ ಹಾಗೂ ಶಬ್ದ ಕೇಳಿದಾಗ ಗಲಾಟೆ ಮಾಡುವ ಸಾಧ್ಯತೆ ಹೆಚ್ಚಿದೆ. ಇದರ ಮದವನ್ನು ಕಡಿಮೆ ಮಾಡುವ ಉದ್ದೇಶದಿಂದ ವಿಕ್ರಮನಿಗೆ ವಿಶೇಷ ಆರೈಕೆ ಮಾಡಲಾಗುತ್ತಿದೆ. ಇದರ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಲು ಇದಕ್ಕೆ ಪ್ರತಿ ದಿನ ನಾಲ್ಕು ಬಾರಿ ತಣ್ಣೀರಿನಲ್ಲಿ ಸ್ನಾನ ಮಾಡಿಸಿ, ಕುಸಲ್ಕಿ, ಮೊಸರನ್ನಾ ಈ ರೀತಿಯಾ ತಂಪಾದ ಆಹಾರ ಪದಾರ್ಥಗಳನ್ನು ನೀಡಲಾಗುತ್ತದ್ದು, ಬೇರೆ ಆನೆಗಳಿಗೆ ಕೊಡುತ್ತಿರುವ ಆಹಾರ ಪದಾರ್ಥಗಳನ್ನು ಈ ಆನೆಗೆ ನೀಡುತ್ತಿಲ್ಲ.
ಒಟ್ಟಾರೆ ಸತತ ಐದು ವರ್ಷಗಳ ಕಾಲ ಪಟ್ಟದ ಆನೆಯ ಜವಾಬ್ದಾರಿ ಹೊತ್ತಿದ್ದ ವಿಕ್ರಮನಿಗೆ ಮದವೇರಿದ್ದು, ಯಾವುದೇ ಅಹಿತಕರ ಘಟನೆಗಳು ಜರುಗಬಾರದು ಎಂದು ವಿಕ್ರಮನಿಗೆ ಈ ಬಾರಿ ದಸರಾದಿಂದ ಗೇಟ್ ಪಾಸ್ ನೀಡಲಾಗಿದೆ. ಮುಂದಿನ ದಸರಾ ವೇಳೆಗೆ ನಮ್ಮ ಮೆಚ್ಚಿನ ವಿಕ್ರಮ ಮೋಸ್ಟ್ ಎಲಿಜಬಲ್ ಆಗಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕು ಎನ್ನುವುದೇ ನಮ್ಮ ಆಶಯವಾಗಿದೆ.