ಚಿಕ್ಕೋಡಿ: ದಸರಾ ಉತ್ಸವದಲ್ಲಿ 9 ದಿನ ಆದಿಶಕ್ತಿ ದುರ್ಗಾಮಾತೆಗೆ ವಿಭಿನ್ನದ ಜೊತೆಗೆ ವಿಶೇಷವಾಗಿ ಪೂಜೆ ಮಾಡುವುದು ವಾಡಿಕೆ. ಆದರೆ ದಸರಾ ಉತ್ಸವದಲ್ಲಿ ಪೌರ ಕಾರ್ಮಿಕ ಮಹಿಳೆಯರಿಗೆ ನಮ್ಮನ್ನ ಕಾಪಾಡುವ ದುರ್ಗಾಮಾತೆಯರು ಎಂದು ಪೌರ ಕಾರ್ಮಿಕ ಮಹಿಳೆಯರಿಗೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಪೂಜೆ ಸಲ್ಲಿಸಿ ಮಾದರಿಯಾಗಿದ್ದಾರೆ.
ಉತ್ತರ ಕರ್ನಾಟಕದಲ್ಲೆ ಭಾವೈಕ್ಯತೆಯ ಸಂಕೇತವಾಗಿ ಅದ್ದೂರಿಯಾಗಿ ಆಚರಿಸುವ ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ಪೌರ ಕಾರ್ಮಿಕ ಮಹಿಳೆಯರಿಗೆ ವಿಶೇಷವಾಗಿ ಗೌರವ ಸಲ್ಲಿಸಲಾಗಿದೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಪೌರ ಕಾರ್ಮಿಕ ಮಹಿಳೆಯರಿಗೆ ಉಡಿ ತುಂಬಿ, ದೀಪ ಬೆಳಗಿ ವಿಶೇಷವಾದ ಪೂಜೆ ಸಲ್ಲಿಸಿದರು. ಸ್ವಾಮೀಜಿ ಅವರಿಗೆ ವಿಧಾನಸಭೆಯ ಉಪಸಭಾಪತಿ ಆನಂದ್ ಮಾಮನಿ, ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ದಂಪತಿ ಸಾಥ್ ನೀಡಿದರು. ಇದನ್ನೂ ಓದಿ: ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಟಾಂಗಾದಲ್ಲಿ ಆಗಮಿಸಿದ ಸೋಮಶೇಖರ್
ನಗರವನ್ನು ಸ್ವಚ್ಛಂದವಾಗಿಡುವ ಮಹಿಳಾ ಪೌರ ಕಾರ್ಮಿಕರಿಗೆ ಹಾಗೂ ಪುರುಷ ಪೌರ ಕಾರ್ಮಿಕರ ಪತ್ನಿಯರಿಗೆ ಈ ಸಂದರ್ಭದಲ್ಲಿ ಪೂಜೆ ಸಲ್ಲಿಸಲಾಯಿತು. ಸೀರೆ ನೀಡಿ, ಉಡಿ ತುಂಬುವದರ ಜೊತೆಗೆ ಆರತಿ ಮಾಡಿ ವಿಶೇಷವಾದ ಗೌರವ ನೀಡಲಾಯಿತು. ಕೊರೊನಾ ಮಹಾಮಾರಿ ಸಂದರ್ಭದಲ್ಲಿ ನಗರ ಹಾಗೂ ಗ್ರಾಮಗಳನ್ನು ಸ್ವಚ್ಛವಾಗಿಟ್ಟು, ಜನರ ಆರೋಗ್ಯವನ್ನ ಕಾಪಾಡಿದ ಪೌರ ಕಾರ್ಮಿಕರಿಗೆ ಈ ರೀತಿಯಾದ ಸನ್ಮಾನ ಮಾಡಿದ ಕಾರ್ಯವನ್ನು ವಿಧಾನಸಭೆಯ ಉಪಸಭಾಪತಿ ಶ್ಲಾಘಿಸಿದರು.
ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರನ್ನು ಗುರುತಿಸಿ ದಸರೆಯ ಸಂದರ್ಭದಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿ, ಗೌರವ ಸಲ್ಲಿಸಿದ ಹುಕ್ಕೇರಿ ಹಿರೇಮಠದ ಕಾರ್ಯಕ್ಕೆ ಸಾರ್ವಜನಿಕ ಪ್ರಶಂಸೆ ವ್ಯಕ್ತವಾಗುವುದರ ಜೊತೆಗೆ ರಾಜ್ಯದ ವಿವಿಧ ಮಠಾಧೀಶರಿಗೆ ಹುಕ್ಕೇರಿ ಶ್ರೀಗಳ ಕಾರ್ಯ ಮಾದರಿಯಾಗಿದೆ. ಇದನ್ನೂ ಓದಿ: 550 ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ವ್ಯಕ್ತಿ – ವೀಡಿಯೋ ವೈರಲ್