ಮಡಿಕೇರಿ: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಸಾಂಪ್ರದಾಯದಂತೆ ಕೊಡಗಿನಿಂದ ಮೂರು ಆನೆಗಳ ದಂಡು ಪಯಣ ಆರಂಭಿಸಿದೆ.
ಕುಶಾಲನಗರದ ಆನೆಕಾಡುವಿನಿಂದ ವಿಕ್ರಂ, ಧನಂಜಯ ಮತ್ತು ಗೋಪಿ ಎಂಬ ಮೂರು ಆನೆಗಳು ಮೈಸೂರು ಅರಮನೆ ನಗರಿಗೆ ಕಳುಹಿಸಿಕೊಡಲಾಗಿದೆ. ಆನೆಕಾಡುವಿನಿಂದ ಮಾವುತರು ಆನೆಗಳಿಗೆ ಪೂಜೆ ಸಲ್ಲಿಸಿ ಬಳಿಕ ಲಾರಿ ಮೂಲಕ ಹುಣಸೂರಿಗೆ ಕಳುಹಿಸಿ ಕೊಟ್ಟಿದ್ದಾರೆ.
ಆನೆಕಾಡುವಿನಿಂದ ಇನ್ನೂ ಕೆಲವು ಆನೆಗಳು ಮೈಸೂರಿಗೆ ತೆರಳಲಿದ್ದು, ವಿಶೇಷವಾಗಿ ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗಹಿಸುತ್ತಿರುವ ಧನಂಜಯ ಆನೆ ಮೇಲೆ ಎಲ್ಲರು ಆಸಕ್ತಿ ವಹಿಸಿದ್ದಾರೆ. ಎಲ್ಲಾ ಆನೆಗಳು ಕಾಡುಬಿಟ್ಟು ಅರಮನೆಯತ್ತ ಪ್ರಯಾಣ ಬೆಳೆಸಲು ಸಿದ್ಧವಾಗಿದ್ದರೆ ಧನಂಜಯ ಮಾತ್ರ ಕಾಡು ಬಿಟ್ಟು ಬರಲು ಹಿಂದೇಟು ಹಾಕಿದ್ದ. ಮಾವುತರು 1 ಗಂಟೆಗೂ ಹೆಚ್ಚು ಕಾಲ ಎಷ್ಟೇ ಪ್ರಯತ್ನ ಪಟ್ಟರೂ ಲಾರಿ ಹತ್ತಲು ಧನಂಜಯ ಮಾತ್ರ ನಿಂತ ಜಾಗದಿಂದ ಮುಂದೇ ಬರಲಿಲ್ಲ. ಈ ವೇಳೆ ಆತನಿಗೆ ಇಷ್ಟವಾದ ಕಬ್ಬು ಬೆಲ್ಲದಿಂದ ಹಿಡಿದು ಇಷ್ಟವಾದ ಎಲ್ಲಾ ತಿಂಡಿಯನ್ನು ನೀಡಿ ಬಳಿಕ ಗೋಪಿ ಮತ್ತು ವಿಕ್ರಮ್ ಸಹಾಯದಿಂದ ಧನಂಜಯನನ್ನು ಲಾರಿ ಹತ್ತಿಸಲಾಯಿತು.
ಇದೇ ಪ್ರಥಮ ಬಾರಿಗೆ ಲಾರಿ ಹತ್ತುತ್ತಿರುವ ಧನಂಜಯ ವಾಹನ ಕಂಡು ಸ್ವಲ್ಪ ಭಯಪಟ್ಟಿದೆ. ಅದ್ದರಿಂದ ಆನೆಗೆ ಗಾಬರಿ ಆಗದಿರಲಿ ಎಂದು ಮಾವುತರು ಕೂಡ ಧನಂಜಯನೊಂದಿಗೆ ನಿಂತು ಪ್ರಯಾಣ ಆರಂಭಿಸಿದ್ದಾರೆ. ಇನ್ನು ಭಾರೀ ಮಳೆಯಿಂದ ಮಡಿಕೇರಿಯಲ್ಲೂ ದಸರಾ ಸರಳ ಆಚರಣೆ ಮಾಡಲು ನಿರ್ಧಾರ ಮಾಡಿ ಚಾಲನೆ ನೀಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv