ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂಚೂರೂ ಗ್ಯಾಪು ಕೊಡದಂತೆ ಯಜಮಾನ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಎರಡ್ಮೂರು ತಿಂಗಳ ಕಾಲ ಸತತವಾಗಿ ಈ ಚಿತ್ರಕ್ಕಾಗಿ ಸಮಯ ಮೀಸಲಿಟ್ಟಿದ್ದ ಈ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಇದೀಗ ಸಮಾಪ್ತಿಗೊಂಡಿದೆ.
ಮೈಸೂರಿನಲ್ಲಿಯೇ ನಿರ್ಮಿಸಲಾಗಿದ್ದ ವಿಶೇಷವಾದ ಸೆಟ್ಟಿನಲ್ಲಿ ಯಜಮಾನ ಚಿತ್ರದ ಚಿತ್ರೀಕರಣ ಚಾಲೂ ಆಗಿತ್ತು. ಆ ನಂತರದಲ್ಲಿ ಮಂಗಳೂರು ಸೇರಿದಂತೆ ಕರ್ನಾಟಕದ ನಾನಾ ಭಾಗಗಳಲ್ಲಿ ಚಿತ್ರೀಕರಣ ನಡೆದು ಇದೀಗ ಮೈಸೂರಿನಲ್ಲಿಯೇ ಅಂತಿಮ ಹಂತ ತಲುಪಿದೆ.
ಖ್ಯಾತ ನಿರ್ದೇಶಕ ಬಿ. ಸುರೇಶ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಉಳಿದುಕೊಂಡಿದೆ. ಇದು ಇಡೀ ಚಿತ್ರದ ಆಂತರ್ಯದಂಥಾ ಹಾಡಂತೆ. ಅದನ್ನು ವಿಶೇಷವಾಗಿ ರೂಪಿಸಬೇಕೆಂಬ ಮಹದಾಸೆಯಿಂದ ಬಾಕಿ ಉಳಿಸಿಕೊಳ್ಳಲಾಗಿದೆ. ಅದಕ್ಕಾಗಿ ಈಗಾಗಲೇ ಚಿತ್ರತಂಡ ತಯಾರಿ ಆರಂಭಿಸಿದೆ. ಹಾಡು ಯಾವಾಗ ರೆಡಿಯಾದರೂ ಬಂದು ನಟಿಸೋ ಭರವಸೆಯನ್ನೂ ದರ್ಶನ್ ಕೊಟ್ಟಿದ್ದಾರಂತೆ.
ಈ ಹಾಡಿನ ಜೊತೆಜೊತೆಗೇ ಉಳಿದ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಲು ಚಿತ್ರ ತಂಡ ತೀರ್ಮಾನಿಸಿದೆ. ದರ್ಶನ್ ಅವರು ಸೆಪ್ಟೆಂಬರ್ ತಿಂಗಳಲ್ಲಿ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಲಿದ್ದಾರಂತೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿರೋ ಈ ಚಿತ್ರದಲ್ಲಿ ದರ್ಶನ್ ಅವರ ಲುಕ್ಕು ಹೇಗಿದೆ ಎಂಬುದರಿಂದ ಹಿಡಿದು ಅಭಿಮಾನಿಗಳಲ್ಲಿರೋ ಕುತೂಹಲ ಒಂದೆರಡಲ್ಲ. ಅದೆಲ್ಲವೂ ಆದಷ್ಟು ಬೇಗನೆ ತಣಿಯಲಿದೆ. ಯಾಕೆಂದರೆ ಮಿಂಚಿನ ವೇಗದಲ್ಲಿ ಎಲ್ಲ ಮುಗಿಸಿಕೊಂಡು ಚಿತ್ರವನ್ನು ಬಿಡುಗಡೆ ಮಾಡಲು ಬಿ ಸುರೇಶ್ ತೀರ್ಮಾನಿಸಿದ್ದಾರೆ.