ಬೆಂಗಳೂರು: ಹೊಸಾ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಲೇ ಬಂದಿರುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಬಿಡುವಿಲ್ಲದಿದ್ದರೂ ಅತಿಥಿ ಪಾತ್ರಗಳಲ್ಲಿ ನಟಿಸುತ್ತಾ, ಒತ್ತಡಗಳಿದ್ದರೂ ಕಾರ್ಯಕ್ರಮಗಳಿಗೆ ಹೋಗಿ ಬೆನ್ನು ತಟ್ಟುವ ಮನಸ್ಥಿತಿ ಹೊಂದಿರೋ ದರ್ಶನ್ ಇದೀಗ ಶಶಿಕುಮಾರ್ ಪುತ್ರನ ಚಿತ್ರದ ಮುಹೂರ್ತದಲ್ಲಿಯೂ ಪಾಲ್ಗೊಳ್ಳಲಿದ್ದಾರೆ.
ಶಶಿಕುಮಾರ್ ಪುತ್ರ ಆದಿತ್ಯ ನಾಯಕನಾಗಿ ಎಂಟ್ರಿ ಕೊಡುತ್ತಿರುವ ವಿಚಾರ ಗೊತ್ತೇ ಇದೆ. ಈ ಚಿತ್ರದ ಮುಹೂರ್ತ ಸಮಾರಂಭ ಸೆಪ್ಟೆಂಬರ್ 2ರ ಭಾನುವಾರ ಅದ್ಧೂರಿಯಾಗಿ ನೆರವೇರಲಿದೆ. ಈ ಸಮಾರಂಭದಲ್ಲಿ ಹಾಜರಿರಲಿರುವ ದರ್ಶನ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಶಶಿಕುಮಾರ್ ಮಗನ ಚಿತ್ರಕ್ಕೆ ಅಪೂರ್ವ ನಾಯಕಿ!
ಒಂದು ಅವಘಡದ ನಂತರ ಚಿತ್ರರಂಗದಿಂದ ದೂರವೇ ಉಳಿದಿರುವ ಶಶಿಕುಮಾರ್ ಇದೀಗ ತಮ್ಮ ಪುತ್ರನನ್ನು ಹೀರೋ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ನಾಯಕನಟನಾಗಿ ಉತ್ತುಂಗದಲ್ಲಿರುವಾಗಲೇ ಅಪಘಾತವೊಂದಕ್ಕೀಡಾಗಿ ನೇಪಥ್ಯಕ್ಕೆ ಸರಿದಿದ್ದವರು ಶಶಿಕುಮಾರ್. ಆ ನಂತರ ಸಾಕಷ್ಟು ನೋವುಂಡ ಅವರು ಚಿತ್ರರಂಗದಿಂದ ದೂರ ಸರಿದಿದ್ದರು. ಇದೀಗ ಅವರಲ್ಲಿ ಉಳಿದು ಹೋದಂತಿರೋ ಬಾಕಿ ಕನಸುಗಳನ್ನು ಮಗನ ಮೂಲಕ ನನಸಾಗಿಸಿಕೊಳ್ಳುವ ಹುರುಪಿನಿಂದಲೇ ಈ ಚಿತ್ರವನ್ನವರು ಆರಂಭಿಸಿದ್ದಾರೆ.
ಹಿರಿಯ ನಟ ಶಶಿಕುಮಾರ್ ಮಗನ ಚಿತ್ರದ ಮುಹೂರ್ತಕ್ಕೆ ದರ್ಶನ್ ಖುಷಿಯಿಂದಲೇ ಬರಲೊಪ್ಪಿಕೊಂಡಿದ್ದಾರೆ. ಕ್ಲ್ಯಾಪ್ ಮಾಡುವ ಮೂಲಕ ಈ ಚಿತ್ರಕ್ಕೆ ಚಾಲನೆಯನ್ನೂ ಕೊಡಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv