ಬೆಂಗಳೂರು: ಎರಡು ದಿನಗಳಿಂದ ನಗರದಲ್ಲಿ ಗಾಳಿ ಸಹಿತ ಮಳೆಯಾಗುತ್ತಿದ್ದ ಪರಿಣಾಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮುಂದೆ ಮರ ಧರೆಗುರುಳಿತ್ತು. ಆದರೆ ಎರಡು ದಿನಗಳಾದರೂ ಬಿಬಿಎಂಪಿ ಅವರು ಮರವನ್ನು ತೆರವು ಮಾಡಿರಲಿಲ್ಲ. ಇದೀಗ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಿಸುತ್ತಿದ್ದಂತೆ ಮರಗಳನ್ನು ತೆರವು ಮಾಡಿದ್ದಾರೆ.
ನಟ ದರ್ಶನ್ ಮನೆ ಮುಂದೆ 2 ಮರಗಳು ನೆಲಕ್ಕೆ ಉರುಳಿದ್ದವು. ಹೀಗಾಗಿ ಬಿಬಿಎಂಪಿ ಕಂಟ್ರೋಲ್ ರೂಂಗೆ ಫೋನ್ ಮಾಡಿ ಗೋರೂರು ರಾಮಚಂದ್ರಪ್ಪ ದೂರು ನೀಡಿದ್ದರು. ದೂರು ನೀಡಿ 24 ಗಂಟೆ ಕಳೆದಿದ್ದರೂ ಬಿಬಿಎಂಪಿ ಸಿಬ್ಬಂದಿ ಬಂದು ಮರದ ತೆರವು ಕಾರ್ಯ ಮಾಡಿರಲಿಲ್ಲ.
ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದನ್ನು ನೋಡಿ ಎಚ್ಚೆತ್ತ ಅರಣ್ಯ ಘಟಕ ತಕ್ಷಣ ದರ್ಶನ್ ಮನೆ ಮುಂದೆ ಬಂದು ಮರ ತೆರವು ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಗೊರೂರು ಚೆನ್ನಬಸಪ್ಪ ಅವರು, ಬಿಬಿಎಂಪಿಗೆ ನಾನೇ ದೂರು ನೀಡಿದೆ. ಆದರೆ ಶುಕ್ರವಾರ ಪಾಲಿಕೆ ಸಿಬ್ಬಂದಿ ಎಲ್ಲ ಕಡೆ ಮರ ತೆರವು ಮಾಡಿದ್ದರು. ಆದರೆ ದರ್ಶನ್ ಮನೆ ಮುಂದೆ ಯಾಕೆ ಬಿಟ್ಟು ಹೋದರು ಗೊತ್ತಾಗಲಿಲ್ಲ. ಮರ ಬಿದ್ದ ಜಾಗದಲ್ಲಿ ಸಂದಿ ಮಾಡಿಕೊಂಡು ಜನರು ಓಡಾಡುತ್ತಿದ್ದರು ಎಂದು ತಿಳಿಸಿದರು.
20ಕ್ಕೂ ಹೆಚ್ಚು ಸಿಬ್ಬಂದಿಯಿಂದ ಮರ ತೆರವು ಕಾರ್ಯ ಚುರುಕುಗೊಂಡಿದೆ. ಮಂಡ್ಯದಲ್ಲಿ ಸುಮಲತಾ ಬೆನ್ನಿಗೆ ನಿಂತಿದ್ದಕ್ಕೆ ನಟ ದರ್ಶನ್ ಅವರ ಮುಂದೆ ಮರ ಬಿದ್ದರೂ ಬಿಬಿಎಂಪಿ ಸಿಬ್ಬಂದಿ ಮರ ತೆರವು ಕಾರ್ಯ ಮಾಡುತ್ತಿಲ್ಲವೇ ಎಂದು ದರ್ಶನ್ ಅಭಿಮಾನಿಗಳು ಪ್ರಶ್ನಿಸುತ್ತಿದ್ದರು.