ರಾಮನಗರ: ಮಂಡ್ಯದಲ್ಲಿ ನಿಖಿಲ್ ಸೋಲಿಗೆ ರಾಮನಗರದಲ್ಲಿ ಸೇಡು ತೀರಿಸಿಕೊಂಡ್ರಾ ಎಂಬ ಅನುಮಾನವೊಂದು ಇದೀಗ ಕಾಡುತ್ತಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಡ್ಡಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹಾಡುಗಳನ್ನು ಬ್ಯಾನ್ ಮಾಡಲಾಗಿದೆ.
ಹೌದು. ರಾಮನಗರದಲ್ಲಿ ಚಾಮುಂಡೇಶ್ವರಿ ವರ್ಧಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ದರ್ಶನ್ ಸಿನಿಮಾದ ಹಾಡು ಹಾಡೋಕೆ ಮುಂದಾದರೂ ಆಯೋಜಕರು ಬಿಟ್ಟಿಲ್ಲ. ಯಾವುದೇ ಕಾರಣಕ್ಕೂ ದರ್ಶನ್ ಸಿನಿಮಾದ ಹಾಡನ್ನು ಹಾಡಲೇಬಾರದು ಎಂದು ಕಾರ್ಯಕ್ರಮದ ಆಯೋಜಕರು ಫರ್ಮಾನು ಹೊರಡಿಸಿರುವುದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ದರ್ಶನ್ ಸಿನಿಮಾದ ಹಾಡುಗಳು ಯಾಕೆ ಬೇಡವೆಂದು ಹೇಳಿರುವುದರ ಬಗ್ಗೆ ಆಯೋಜಕರು ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಮಂಡ್ಯ ಚುನಾವಣೆಯ ಎಫೆಕ್ಟ್ ನಿಂದಾಗಿಯೇ ರಾಮನಗರದಲ್ಲಿ ದರ್ಶನ್ ಸಿನಿಮಾದ ಹಾಡುಗಳನ್ನು ಬ್ಯಾನ್ ಮಾಡಿರಬಹುದು ಎಂದು ಹೇಳಲಾಗುತ್ತಿದೆ.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್ ಪರ ದರ್ಶನ್ ಹಾಗೂ ಯಶ್ ಚುನಾವಣಾ ಪ್ರಚಾರ ಮಾಡಿದ್ದರು. ಈ ಚುನಾವಣೆಯಲ್ಲಿ ಜೆಡಿಎಸ್ (ಮೈತ್ರಿ) ಅಭ್ಯರ್ಥಿಯಾಗಿ ನಿಖಿಲ್ ಕುಮಾರ್ ಸ್ಪರ್ಧೆ ಮಾಡಿದ್ದರು. ಆದರೆ ಚುನಾವಣೆಯಲ್ಲಿ ನಿಖಿಲ್ ಸೋಲನುಭವಿಸಿದ್ದರು. ಹೀಗಾಗಿ ನಿಖಿಲ್ ಸೋಲಿಗೆ ಚಿತ್ರನಟರೇ ಕಾರಣ ಎಂಬ ಸಿಟ್ಟು ಕುಮಾರಸ್ವಾಮಿ ಅಭಿಮಾನಿಗಳಲ್ಲಿತ್ತು. ಈ ಸಿಟ್ಟನ್ನು ಇದೀಗ ರಾಮನರದಲ್ಲಿ ತೀರಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.