ಮಂಡ್ಯ: ಲೋಕಸಭಾ ಚುನಾವಣೆಗೆ ಇನ್ನೂ ಏಳು ದಿನಗಳಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ದರ್ಶನ್ ಮಂಡ್ಯ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಈ ಮಧ್ಯೆಯೂ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡು ಮಾನವೀಯತೆ ಮೆರೆದಿದ್ದಾರೆ.
ನಟ ದರ್ಶನ್ ಬುಧವಾರ ಕೆ.ಆರ್. ನಗರದಲ್ಲಿ ಪ್ರಚಾರ ಮಾಡುತ್ತಿದ್ದರು. ದರ್ಶನ್ ಹಿಂದೆಯೇ ಅಭಿಮಾನಿಗಳು ಅವರನ್ನು ಸುತ್ತವರಿದು ಫೋಷಣೆ ಕೂಗುತ್ತಿದ್ದರು. ಹೀಗೆ ಪ್ರಚಾರ ಮಾಡುವಾಗ ನಗರದಲ್ಲಿ ಆಸ್ಪತ್ರೆ ಮುಂದೆ ಹೋಗಿದ್ದಾರೆ.
ಅಲ್ಲಿಯೂ ಅಭಿಮಾನಿಗಳು ಜೋರಾಗಿ ಕೂಗುತ್ತಿದ್ದರು. ಆದ ನಟ ದರ್ಶನ್ ಇದು ಆಸ್ಪತ್ರೆ. ಇಲ್ಲಿ ಗಲಾಟೆ ಮಾಡುವುದು, ಕೂಗಾಡುವುದು ಮಾಡಬಾರದು. ರೋಗಿಗಳಿಗೆ ತೊಂದರೆಯಾಗುತ್ತದೆ ಎಂದು ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದರು. ದರ್ಶನ್ ಮನವಿ ಮಾಡಿಕೊಂಡಿದ್ದ ವಿಡಿಯೋವನ್ನು ಅಭಿಮಾನಿಗಳು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ದರ್ಶನ್ ಮನವಿಯಿಂದ ಅಲ್ಲಿದ್ದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ದರ್ಶನ್ ಸ್ವಾಗತಿಸುವ ವೇಳೆ ಪಟಾಕಿ ಹೊಡೆಯಲು ಮುಂದಾದ ಅಭಿಮಾನಿಗಳಲ್ಲೂ ಮನವಿ ಮಾಡಿಕೊಂಡಿದ್ದಾರೆ.
ಪಟಾಕಿ ಹೊಡೆಯುವುದರಿಂದ ಪರಿಸರ ಮಾಲಿನ್ಯವಾಗುತ್ತದೆ. ಅಷ್ಟೇ ಅಲ್ಲದೇ ನಮ್ಮ ಆರೋಗ್ಯಕ್ಕೂ ಹಾನಿಯಾಗುತ್ತದೆ ಪ್ರಾಣಿ-ಪಕ್ಷಿಗಳಿಗೂ ತೊಂದರೆಯಾಗುತ್ತವೆ ಎಂದು ಅಭಿಮಾನಿಗಳಿಗೆ ಬುದ್ಧಿ ಮಾತನ್ನು ಹೇಳಿದ್ದಾರೆ. ಮಧ್ಯಾಹ್ನ ಸಾಮಾನ್ಯರಂತೆ ನಿಂತು ಎಲ್ಲರೊಟ್ಟಿಗೆ ದರ್ಶನ್ ಊಟ ಮಾಡಿದ್ದಾರೆ. ದರ್ಶನ್ ಅವರ ಈ ನಡೆಯಿಂದ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.