– ಪುನೀತ್, ದರ್ಶನ್ ಪರಸ್ಪರ ತಬ್ಬಿಕೊಂಡಿರೋ ಚಿತ್ರ ಬಿಡಿಸಿದ ಅಭಿಮಾನಿ
– ಸ್ಟಾರ್ ವಾರ್ ಬೇಡ.. ಕನ್ನಡ ಸಿನಿಮಾ ನೋಡೋಣ ಎಂದು ಸಂದೇಶ
ಪುನೀತ್ ರಾಜ್ಕುಮಾರ್ ಜನ್ಮದಿನದ ಹಿನ್ನೆಲೆಯಲ್ಲಿ ಇಂದು ಅಪ್ಪು ಸಿನಿಮಾ ರೀ-ರಿಲೀಸ್ ಆಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಈ ನಡುವೆ ದರ್ಶನ್ ಅಭಿಮಾನಿಯೊಬ್ಬ ‘ಅಪ್ಪು’ ಸಿನಿಮಾ ವೀಕ್ಷಿಸಿ ಗಮನ ಸೆಳೆದಿದ್ದಾರೆ.
ಸ್ಟಾರ್ ವಾರ್ಗೆ ಬ್ರೇಕ್ ಹಾಕಲು ದರ್ಶನ್ ಅಭಿಮಾನಿ ವಿಭಿನ್ನ ಪ್ರಯತ್ನವೊಂದನ್ನು ಮಾಡಿದ್ದಾರೆ. ರೀ-ರಿಲೀಸ್ ಆಗಿರುವ ಅಪ್ಪು ಸಿನಿಮಾವನ್ನು ಥಿಯೇಟರ್ಗೆ ಬಂದು ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ.
ಈ ವೇಳೆ, ದರ್ಶನ್ ಅಭಿಮಾನಿ ಫೋಟೊವೊಂದನ್ನು ತಂದಿದ್ದರು. ಅದರಲ್ಲಿ, ನಟ ದರ್ಶನ್ ಮತ್ತು ಪುನೀತ್ ರಾಜ್ಕುಮಾರ್ ಪರಸ್ಪರರು ಅಪ್ಪಿಕೊಂಡಿರುವ ಚಿತ್ರ ಬಿಡಿಸಲಾಗಿತ್ತು. ಈ ಫೋಟೊವನ್ನು ಪ್ರದರ್ಶಿಸುವ ಮೂಲಕ ದರ್ಶನ್ ಅಭಿಮಾನಿ, ಸ್ಟಾರ್ ವಾರ್ ಬಿಟ್ಟು ಕನ್ನಡ ಸಿನಿಮಾ ನೋಡೋಣ ಎಂಬ ಸಂದೇಶ ರವಾನಿಸಿದ್ದಾರೆ.
ಈ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ದರ್ಶನ್ ಅಭಿಮಾನಿ ರಕ್ಷಿತ್, ಸ್ಟಾರ್ ವಾರ್ ಮಾಡಬಾರದು ಎಂಬ ಸಂದೇಶ ನೀಡುವ ಉದ್ದೇಶದಿಂದ ಈ ಚಿತ್ರಕಲೆ ಬಿಡಿಸಿದ್ದೇನೆ. ನಮಗೆ ಪುನೀತ್ ರಾಜ್ಕುಮಾರ್ ಬೇರೆಯಲ್ಲ, ಡಿ ಬಾಸ್ ಬೇರೆಯಲ್ಲ. ಎಲ್ಲಾರೂ ಒಂದೆ. ಆದರೆ, ನಾನು ಡಿ ಬಾಸ್ನ ಜಾಸ್ತಿ ನಂಬುತ್ತೇನೆ ಎಂದು ತಿಳಿಸಿದ್ದಾರೆ.
ಕನ್ನಡ ಇಂಡಸ್ಟ್ರಿಯಲ್ಲಿ ಪುನೀತ್ ರಾಜ್ಕುಮಾರ್, ಸುದೀಪ್, ಉಪೇಂದ್ರ ಅವರನ್ನು ಬಿಟ್ಟು ಕೊಡ್ತೀವಿ ಅಂತಲ್ಲ. ಎಲ್ಲಾ ಮೂವಿಗಳನ್ನೂ ನೋಡ್ತೀವಿ. ಆದರೆ, ಡಿ ಬಾಸ್ ಒಂದು ಕೈ ಮೇಲೆ. ನಾನು ಡಿ ಬಾಸ್ ಫ್ಯಾನ್ ಆಗಿರುವುದರಿಂದ ಅವರು ಒಂದು ಕೈ ಮೇಲೆ ಎಂದರು.
ಡಿ ಬಾಸ್ ಮತ್ತು ಪುನೀತ್ ರಾಜ್ಕುಮಾರ್ ಫ್ಯಾನ್ಸ್ ನಡುವೆ ಯಾವುದೇ ರೀತಿಯ ಗಲಾಟೆ ಇಲ್ಲ. ಆದರೆ, ಬೇರೆ ಬೇರೆ ವಿಚಾರಗಳಲ್ಲಿ ಫ್ಯಾನ್ ವಾರ್ ಮಾಡುವುದಕ್ಕೆ ಹೋಗಬೇಡಿ ಎಂದು ಹೇಳುವುದಕ್ಕೆ ಇಷ್ಟ ಪಡ್ತೀನಿ. ಡಿ ಬಾಸ್ ಫ್ಯಾನ್ಸ್ ಯಾವುದೇ ರೀತಿಯ ಫ್ಯಾನ್ ವಾರ್ ಮಾಡಲ್ಲ ಎಂಬುದು ಎಲ್ಲರಿಗೂ ಗೊತ್ತಾಗಬೇಕು ಅನ್ನೋದು ನಮ್ಮ ಉದ್ದೇಶ. ಈಗ ಸ್ಟಾರ್ ಸ್ಟಾರ್ಗಳೇ ಚೆನ್ನಾಗಿದ್ದಾರೆ. ನಾವು ಫ್ಯಾನ್ ವಾರ್ ಯಾಕೆ ಮಾಡಬೇಕು? ನಾವೆಲ್ಲ ಒಟ್ಟಿಗೆ ಚೆನ್ನಾಗಿರೋಣ. ಕನ್ನಡ ಸಿನಿಮಾಗಳನ್ನು ಬೆಳೆಸೋಣ ಎಂದು ತಿಳಿಸಿದರು.