ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರನ್ನು ನೋಡುತ್ತಿದ್ದಂತೆ ಚಾಲೆಜಿಂಗ್ ಸ್ಟಾರ್ ದರ್ಶನ್ ಆಶೀರ್ವಾದ ಪಡೆಯಲು ಮುಂದಾಗಿದ್ದಾರೆ.
ಇತ್ತೀಚೆಗೆ ಶಶಿಕುಮಾರ್ ಅವರ ಮಗ ಅದಿತ್ಯ ಅಭಿನಯಿಸುತ್ತಿರುವ ‘ಮೊಡವೆ’ ಚಿತ್ರಕ್ಕೆ ಶುಭ ಕೋರಲು ಚಿತ್ರದ ಮುಹೂರ್ತದ ಕಾರ್ಯಕ್ರಮದಲ್ಲಿ ದರ್ಶನ್ ಹಾಗೂ ಶಿವರಾಜ್ಕುಮಾರ್ ಭಾಗವಹಿಸಿದ್ದರು. ಯುವ ಪ್ರತಿಭೆಯನ್ನು ಪ್ರೋತ್ಸಾಹಿಸಲು ಒಬ್ಬರು ನಟರು ಒಂದೇ ವೇದಿಕೆ ಹಂಚಿಕೊಂಡರು.
ಈ ಮುಹೂರ್ತ ಕಾರ್ಯಕ್ರಮಕ್ಕೆ ದರ್ಶನ್ ಮೊದಲು ಆಗಮಿಸಿದ್ದರು. ಬಳಿಕ ಶಿವರಾಜ್ಕುಮಾರ್ ಆಗಮಿಸಿದ್ದರು. ಶಿವಣ್ಣ ಬರುವುದನ್ನು ಗಮನಿಸಿದ ದರ್ಶನ್ ಎದ್ದು ನಿಂತು ಅವರಿಗೆ ಗೌರವ ನೀಡಿದ್ದರು. ಅಲ್ಲದೇ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆಯಲು ಮುಂದಾದರು. ಈ ವೇಳೆ ಶಿವಣ್ಣ ಅವರನ್ನು ತಡೆದು ಅಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ದರ್ಶನ್ ಭೇಟಿ ಖುಷಿ ನೀಡಿದೆ- ರಾಘಣ್ಣ ಸೆಲ್ಫಿ ಫೋಟೋ ವೈರಲ್
ಇದಾದ ಬಳಿಕ ದರ್ಶನ್ ಹಾಗೂ ಶಿವಣ್ಣ ಮುಹೂರ್ತದಲ್ಲಿ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಲು ಮುಂದಾದರು. ಈ ವೇಳೆ ಶಿವಣ್ಣ ಕ್ಲಾಪ್ ಮಾಡಲಿ ಎಂದು ದರ್ಶನ್ ಹಿಂದೆ ಸರಿದರು. ಆದರೆ ಶಿವಣ್ಣ, ದರ್ಶನ್ ಅವರನ್ನು ಎಳೆದು ಪಕ್ಕದಲ್ಲಿ ನಿಲ್ಲಿಸಿಕೊಂಡು ಒಟ್ಟಿಗೆ ಕ್ಲಾಪ್ ಮಾಡಿದರು.
ಸದ್ಯ ಈ ಚಿತ್ರಕ್ಕೆ ಸ್ಟಾರ್ ನಟರಾದ ಶಿವಣ್ಣ ಹಾಗೂ ದರ್ಶನ್ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. ಅಲ್ಲದೇ ಶಿವಣ್ಣ ಅವರನ್ನು ಭೇಟಿಯಾಗುವ ಮೊದಲು ದರ್ಶನ್, ರಾಘಣ್ಣ ಅವರನ್ನು ಭೇಟಿ ಮಾಡಿ ಅವರ ಜೊತೆ ಮಾತನಾಡಿ ಸೆಲ್ಫಿ ತೆಗೆದುಕೊಂಡರು.
ಸದ್ಯ ಈ ಸಿನಿಮಾವನ್ನು ಸಿದ್ಧಾರ್ಥ್ ಮಾರದೆಪ್ಪ ನಿರ್ದೇಶನ ಮಾಡುತ್ತಿದ್ದು, ಸಿನಿಮಾದಲ್ಲಿ ಅಪೂರ್ವ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಹಂಪಿ, ಗುಲ್ಬರ್ಗ, ಬೀದರ್, ರಾಯಚೂರು, ಬಾದಮಿ, ಸೇರಿದಂತೆ ಕೆಲವು ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv