ಕಲಬುರಗಿ: ನಟ ದರ್ಶನ್ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಅಭಿಮಾನಿಗಳು ಸಿಡಿಸಿದ ಪಟಾಕಿ ಸದ್ದಿನಿಂದ ನನ್ನ ಕಿವಿಗಳು ಶ್ರವಣ ಶಕ್ತಿಯನ್ನೇ ಕಳೆದುಕೊಂಡಿವೆ ಎಂದು ಸಾಹಿತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವಧ್ಯಕ್ಷ ಗೊ.ರು.ಚನ್ನಬಸಪ್ಪ ಅಳಲು ತೋಡಿಕೊಂಡಿದ್ದಾರೆ.
ಕಲಬುರಗಿಯಲ್ಲಿ ನಡೆದ ಗೌಡ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ಚಾಲೆಂಜಿಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬದಂದು ಸಿಡಿಸಿದ ಪಟಾಕಿಯ ಶಬ್ದದಿಂದ ನನ್ನ ಕಿವಿಗಳು ಶ್ರವಣ ಶಕ್ತಿಯನ್ನೇ ಕಳೆದುಕೊಂಡಿವೆ. ಇದಕ್ಕಾಗಿ ನಾನು ಯುವಕರನ್ನು ದೂಶಿಸುವುದಿಲ್ಲ. ಎಲ್ಲ ಸ್ಟಾರ್ ನಟರ ಹುಟ್ಟು ಹಬ್ಬಕ್ಕೆ ಅವರ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸುವುದು ಸಾಮಾನ್ಯ. ಆದರೆ ಏನು ಮಾಡುವುದು? ನನ್ನ ಕಿವಿಗಳೂ ಸಹ ಅದೇ ಸಂದರ್ಭದಲ್ಲಿ ಶ್ರವಣ ಶಕ್ತಿ ಕಳೆದುಕೊಂಡವು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ನಟ ದರ್ಶನ್ ಹುಟ್ಟು ಹಬ್ಬ ಅಂದ್ರೆ ಸಾಕು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಾರೆ. ಆದರೆ ಅವರ ಅಭಿಮಾನ ಪ್ರದರ್ಶನ ಮಾಡುವ ಸಂದರ್ಭದಲ್ಲಿ ಆದ ಎಡವಟ್ಟಿನಿಂದ ನಾನು ಶ್ರವಣಶಕ್ತಿ ಕಳೆದುಕೊಂಡಂತಾಗಿದೆ. ಅಲ್ಲದೆ ದರ್ಶನ್ ಹುಟ್ಟಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ಇದ್ದದ್ದು ನನ್ನದೆ ತಪ್ಪು. ಯಾಕಂದ್ರೆ ಸ್ಟಾರ್ಗಳ ಹುಟ್ಟುಹಬ್ಬ ಅಂದ್ರೆ ಸಾಕು ಸಾವಿರಾರು ಅಭಿಮಾನಿಗಳು ಆಗಮಿಸುತ್ತಾರೆ. ಆ ಸಂದರ್ಭದಲ್ಲಿ ನಾನು ಮನೆಯಲ್ಲಿ ಇರದೇ ಇದಿದ್ದರೆ ನನ್ನ ಶ್ರವಣ ಶಕ್ತಿ ಕಳೆದುಕೊಳ್ಳುತ್ತಿರಲಿಲ್ಲ ಎಂದು ಹೇಳಿದರು.
ಸೆಲೆಬ್ರೆಟಿಗಳು ಹುಟ್ಟು ಹಬ್ಬ ಆಚರಿಸಿಕೊಳ್ಳುವ ಮುನ್ನ ಸ್ವಲ್ಪ ಎಚ್ಚರ ವಹಿಸಿ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದರೆ ಇಂತಹ ಘಟನೆಗಳು ಮುಂದೆ ನಡೆಯುವುದನ್ನು ತಡೆಯಬಹುದು. ಯುವಕರೂ ಸಹ ಮಕ್ಕಳು, ವೃದ್ಧರನ್ನು ಗಮನದಲ್ಲಿರಿಸಿಕೊಂಡು ಸಂಭ್ರಮಾಚರಣೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.