ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ರಾಬರ್ಟ್ ಚಿತ್ರೀಕರಣ ಮುಗಿಸಿ ಬ್ರೇಕ್ ಪಡೆದಿದ್ದು, ಪತ್ನಿ ವಿಜಯಲಕ್ಷ್ಮಿ ಜೊತೆ ಟೆಂಪಲ್ ರನ್ ಮಾಡುತ್ತಿದ್ದಾರೆ.
ಹೌದು. ದರ್ಶನ್ ದಂಪತಿ ಈಗ ತಮಿಳುನಾಡಿನ ತಿರುನಲ್ಲರ್ ನ ಪ್ರಸಿದ್ಧ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಶನೇಶ್ವರನಿಗೆ ದರ್ಶನ್ ವಿಶೇಷ ಪೂಜೆ ಕೂಡ ಸಲ್ಲಿಸಿದ್ದಾರೆ. ದರ್ಶನ್ ತಿರುನಲ್ಲರ್ ಗೆ ಭೇಟಿ ನೀಡಿರುವುದು ಇದೆ ಮೊದಲ ಬಾರಿ ಅಲ್ಲ. ಪ್ರತಿವರ್ಷ ಕೂಡ ತಿರುನಲ್ಲರ್ ಗೆ ಬಂದು ದರ್ಶನ್ ದಂಪತಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸುತ್ತ ಬಂದಿದ್ದಾರೆ.
ಈ ಹಿಂದೆ ಶನೇಶ್ವರನ ದರ್ಶನಕ್ಕೆ ಬಂದಾಗ ಡಿ ಬಾಸ್ ತುಲಾಭಾರ ಮಾಡಿಸಿದ್ದರು. ಆದರೆ ಈ ಬಾರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ತಮ್ಮ ಸ್ನೇಹಿತರ ಜೊತೆ ನಿಂತು ದರ್ಶನ್ ಫೋಟೋ ತೆಗೆಸಿಕೊಂಡಿದ್ದಾರೆ. ಈ ವೇಳೆ ದರ್ಶನ್ ಪತ್ನಿ ಕೂಡ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇಷ್ಟು ದಿನ ರಾಬರ್ಟ್ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಿದ್ದ ದರ್ಶನ್ ಈಗ ರಾಜವೀರ ಮದಕರಿ ನಾಯಕ ಚಿತ್ರದಲ್ಲಿ ಬ್ಯುಸಿಯಾಗಲಿದ್ದಾರೆ. ಸಿನಿಮಾಗಾಗಿ ಚಿತ್ರತಂಡ ಭರ್ಜರಿ ತಯಾರಿ ಮಾಡಿಕೊಂಡಿದ್ದು, ಫೆಬ್ರವರಿ 10ರಿಂದ ಚಿತ್ರೀಕರಣ ಶುರುವಾಗಲಿದೆ ಎನ್ನಲಾಗಿದೆ. ಈ ಚಿತ್ರಕ್ಕೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಇತ್ತೀಚಿಗಷ್ಟೆ ಉತ್ತರಾಖಂಡ ಅರಣ್ಯದಲ್ಲಿ ವೈಲ್ಡ್ ಲೈಫ್ ಫೋಟೋಗ್ರಾಫಿ ಮಾಡಲು ಹೋಗಿದ್ದ ದರ್ಶನ್ ಕೆಲ ದಿನಗಳ ಹಿಂದೆ ಬೆಂಗಳೂರಿಗೆ ವಾಪಸ್ ಆಗಿದ್ದರು. ವನ್ಯಜೀವಿ ಮತ್ತು ಪ್ರಾಣಿಪಕ್ಷಿಗಳನ್ನು ಅತಿಯಾಗಿ ಪ್ರೀತಿಸುವ ದರ್ಶನ್ ಇತ್ತೀಚೆಗೆ ಉತ್ತರಾಖಂಡ್ ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಛಾಯಾಗ್ರಹಣ ಮಾಡಿದ್ದರು. ದೊಡ್ಡ ಕ್ಯಾಮೆರಾ ಹೆಗಲಿಗೆ ಹಾಕೊಂಡು ವೈಲ್ಡ್ಲೈಫ್ ಫೋಟೋಗ್ರಾಫರ್ ಟೀಂ ಜೊತೆ ಕಲ್ಲು, ಬಂಡೆಯ ನಡುವೆ ಸಾಗಿ ಕಾಡು ಸುತ್ತಿದ್ದರು. ಆ ದಟ್ಟಕಾಡಿನಲ್ಲಿ ದಾಸ ಮಾಡಿರುವ ಸಾಹಸಮಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿತ್ತು. ಈ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು.