ಕಾರವಾರ: ವಕೀಲ, ಹೋರಾಟಗಾರ, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದಾಂಡೇಲಿಯ ಅಜಿತ್ ನಾಯ್ಕ (Ajit Naik) ಅವರ ಕೊಲೆ ಅಪರಾಧಿ ಪಾಂಡುರಂಗ ಮಾರುತಿ ಕಾಂಬಳೆ ಅಲಿಯಾಸ್ ದೀಪ್ಯಾಗೆ ಶಿರಸಿಯ 1 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ 25 ಸಾವಿರ ರೂ. ದಂಡ ಹಾಕಿದೆ.
ಶಿರಸಿಯ 1 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಮಂಗಳವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿತು. ಇದನ್ನೂ ಓದಿ: ದಾಂಡೇಲಿ ವಕೀಲ ಅಜಿತ್ ನಾಯ್ಕ ಹತ್ಯೆ ಕೇಸ್; ಆರೋಪಿ ದೋಷಿ ಅಂತ ಕೋರ್ಟ್ ತೀರ್ಪು
ವಕೀಲ ಅಜಿತ್ ನಾಯ್ಕರನ್ನು ಕತ್ತಿಯಿಂದ ಕೊಚ್ಚಿ ಬರ್ಬರವಾಗಿ 2018 ಜುಲೈ 27 ರಂದು ಕೊಲೆ ಮಾಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಪಾಂಡುರಂಗ ಕಾಂಬಳೆಗೆ ಜೀವಾವಧಿ ಶಿಕ್ಷೆ ವಿಧಿಸಿತು. ಜೊತೆಗೆ 25 ಸಾವಿರ ರೂಪಾಯಿ ದಂಡ, 50 ಸಾವಿರ ರೂಪಾಯಿ ಮೃತನ ಕುಟುಂಬಕ್ಕೆ ಪರಿಹಾರ ಮತ್ತು ಹೆಚ್ಚಿನ ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಸಮಿತಿಯಿಂದ ಪಡೆಯಬಹುದು ಎಂದು ಮಂಗಳವಾರ ತೀರ್ಪು ಪ್ರಕಟಿಸಿದರು. ವಕೀಲ ಅಜಿತ್ ನಾಯ್ಕ ಅವರನ್ನು ದಾಂಡೇಲಿ ಜೆ.ಎನ್.ರಸ್ತೆಯ ಅವರ ಕಚೇರಿ ಎದುರು ಬರ್ಬರ ಹತ್ಯೆ ಮಾಡಲಾಗಿತ್ತು.
ಕೊಲೆಗಾರ ಪಾಂಡುರಂಗ ಕಾಂಬಳೆ ಆ ದಿನ ನೀಲಿ ಬಣ್ಣದ ಜರ್ಕಿನ್ ಧರಿಸಿ ಅದರೊಳಗೆ ಕತ್ತಿ ಅಡಗಿಸಿಟ್ಟುಕೊಂಡಿದ್ದ. ಅಜಿತ್ ನಾಯ್ಕ ಅವರು ಕಚೇರಿಯಿಂದ ಹೊರಬರುವುದನ್ನು ಕಾಯುತ್ತಿದ್ದ. ರಮೇಶ ನಾಯ್ಕ ಮತ್ತು ಹನುಮಂತ ಕುಂಬಾರ, ವಕೀಲ ಅಜಿತ್ ನಾಯ್ಕ ಜೊತೆ ಕಚೇರಿಯಿಂದ ಹೊರಬಂದು ಕಾರಿನ ಬಳಿ ಬಂದಾಗ ಅವರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿ, ನಂತರ ಸಂಡೆ ಮಾರುಕಟ್ಟೆ ಒಳಗಿನಿಂದ ಓಡಿ ಹೋಗಿದ್ದ. ಕತ್ತಿಯನ್ನು ಜರ್ಕಿನ್ನಲ್ಲಿ ಸುತ್ತಿ ಹಾಳಾಗಿ ನಿಂತಿದ್ದ ಕಾರಿನ ಅಡಿ ಅಡಗಿಸಿಟ್ಟಿದ್ದ. ದಾಂಡೇಲಿ ಮೀನು ಮಾರುಕಟ್ಟೆ ಬಳಿಯಿದ್ದ ಬೈಕಿನಲ್ಲಿ ಎರಡನೇ ಆರೋಪಿಯ ಮನೆಗೆ ಹೋಗಿ, ಹತ್ಯೆಯ ಸಂದರ್ಭದಲ್ಲಿ ಧರಿಸಿದ್ದ ಉಡುಪುಗಳನ್ನು ಬಿಚ್ಚಿಟ್ಟು ಅಲ್ಲಿಂದ ಬೇರೆ ಉಡುಪು ಧರಿಸಿ ಬೈಕಿನಲ್ಲಿ ಪಾಂಡುರಂಗ ಪರಾರಿಯಾಗಿದ್ದ. ಇದನ್ನೂ ಓದಿ: ಕಾರವಾರ | ಮೊಸಳೆಗೆ ಆಹಾರ ಕೊಡ್ಬೇಡಿ ಎಂದಿದ್ದಕ್ಕೆ ಎಸಿಎಫ್ ಹತ್ಯೆ – ಕೊಲೆಗಾರನಿಗೆ 10 ವರ್ಷ ಜೈಲು
ವಕೀಲ ಅಜಿತ್ ನಾಯ್ಕ ಕೊಲೆಗೆ ಕಾರಣ
ದಾಂಡೇಲಿ ಮಾವಂಳಗಿಯಲ್ಲಿರುವ ಜಮೀನೊಂದರ ವಿವಾದಕ್ಕೆ ಸಂಬಂಧಿಸಿ ಕಕ್ಷಿದಾರ ರಾಮಕುಮಾರ ಮಾಳಗೆ ಪರವಾಗಿ ವಕೀಲ ಅಜಿತ್ ನಾಯ್ಕ ವಕಾಲತ್ತು ವಹಿಸಿದ್ದು, ಪಾಂಡುರಂಗ ಕಾಂಬಳೆ ಹಾಗೂ ಭೂಮಾಫಿಯಾ ಸಂಗಡಿಗರು ಸಹಿಸಿರಲಿಲ್ಲ. ಈ ಜಮೀನು ಅಕ್ರಮವಾಗಿ ವಶಪಡಿಸಿಕೊಳ್ಳಲೆತ್ನಿಸಿ, ಎರಡು ಬಾರಿ ಧಾರವಾಡ ಜೈಲಿಗೆ ಹೋಗಿದ್ದರು. ಜೈಲಿನಲ್ಲೇ ಕೊಲೆಗೆ ಅಲ್ಲಿದ್ದ ಅನ್ಯ ಪ್ರಕರಣದ ಕೊಲೆ ಅಪರಾಧಿಯೊಂದಿಗೆ ಮಾತುಕತೆ ನಡೆದ ಬಗ್ಗೆ ಬೇರೊಂದು ಪ್ರಕರಣದ ಕೊಲೆ ಆರೋಪಿ ಸಂದೀಪ ಜಾನ್ ಅಜಿತ ನಾಯ್ಕರೊಟ್ಟಿಗೆ ಮೊಬೈಲ್ ಮೂಲಕ ನಡೆಸಿದ ಸಂಭಾಷಣೆಯನ್ನು ತನಿಖಾಧಿಕಾರಿ ಸಾಕ್ಷ್ಯಕ್ಕಾಗಿ ಸಂಗ್ರಹಿಸಿದ್ದರು. ಧಾರವಾಡದ ಜೈಲಿನಲ್ಲಿದ್ದ ಕೊಲೆ ಆರೋಪಿಯನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಿದ್ದರು. ತನಿಖಾಧಿಕಾರಿ ಸಿಪಿಐ ಅನಿಸ್ ಮುಜಾವರ, ಪಿ.ಸಿ.ಮಂಜುನಾಥ ಶೆಟ್ಟಿ ಬಳ್ಳಾರಿ ಜೈಲಿಗೆ ನ್ಯಾಯಾಲಯದ ಅನುಮತಿಯೊಂದಿಗೆ ಹೋಗಿ ಕೊಲೆ ಅಪರಾಧಿಯ ಧ್ವನಿ ಸ್ಯಾಂಪಲ್ ಪಡೆದು, ಅಜಿತ್ ನಾಯ್ಕ ಅವರ ಧ್ವನಿಯೊಟ್ಟಿಗೆ ಮ್ಯಾಚಿಂಗ್ ಮಾಡಲು ಎಫ್.ಎಸ್.ಎಲ್.ಗೆ ಕಳಿಸಿದ್ದರು. ಎಫ್.ಎಸ್.ಎಲ್ ವರದಿಯಲ್ಲಿ ಧ್ವನಿ ಹೊಂದಾಣಿಕೆಯಾಗಿದೆ. ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪಾಂಡುರಂಗ ಕಾಂಬಳೆಗೆ ಶಿಕ್ಷೆ ಕೊಡಿಸುವಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ ಮಳಗೀಕರ ಸಮರ್ಥವಾದ ಸಾಕ್ಷ್ಯಾಧಾರಗಳ ಸಮೇತ ವಾದ ಮಂಡಿಸಿದ್ದರು. ಇನ್ನುಳಿದ ಆರೋಪಿಗಳ ಕುರಿತು ತೀರ್ಪಿನ ಬಗ್ಗೆ, ತೀರ್ಪು ಪ್ರತಿ ಸಿಕ್ಕ ನಂತರ ಪರಿಶೀಲಿಸಿ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಮರುಪರಿಶೀಲನೆ ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗುವುದೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಮಳಗೀಕರ್ ತಿಳಿಸಿದ್ದಾರೆ.

