– ವಕ್ಫ್ ಕಾಯ್ದೆ ವಿರೋಧಿಸಿ ಪ.ಬಂಗಾಳದಲ್ಲಿ ಹಿಂಸಾಚಾರಕ್ಕೆ ಯುಪಿ ಸಿಎಂ ಬೇಸರ
ಲಕ್ನೋ: ಗಲಭೆಕೋರರಿಗೆ ದಂಡವೇ ಉತ್ತಮ ಮದ್ದು ಎಂದು ವಕ್ಫ್ ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದ ಹಿಂಸಾಚಾರಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಖಂಡನೆ ವ್ಯಕ್ತಪಡಿಸಿದ್ದಾರೆ.
ಹರ್ದೋಯ್ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 2017 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಉತ್ತರ ಪ್ರದೇಶವು ಪ್ರತಿ 2-3 ದಿನಗಳಿಗೊಮ್ಮೆ ಗಲಭೆಗಳನ್ನು ಎದುರಿಸುತ್ತಿತ್ತು. ಗಲಭೆಕೋರರಿಗೆ ದಂಡ ಮಾತ್ರ ಚಿಕಿತ್ಸೆ. ನೀವು ನೋಡಬಹುದು, ಬಂಗಾಳ ಉರಿಯುತ್ತಿದೆ. ಮುಖ್ಯಮಂತ್ರಿ ಮೌನವಾಗಿದ್ದಾರೆ. ಅವರು ಗಲಭೆಕೋರರನ್ನು ‘ಶಾಂತಿ ರಾಯಭಾರಿಗಳು’ ಎಂದು ಕರೆಯುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ನಡೆಗೆ ಯೋಗಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ವಕ್ಫ್ ಹೆಸ್ರಲ್ಲಿ ಬಡವರ ಭೂಮಿ ಕಿತ್ತುಕೊಳ್ಳಲು ಸಾಧ್ಯವಿಲ್ಲ, ಲೂಟಿ ನಿಲ್ಲಲಿದೆ – ನರೇಂದ್ರ ಮೋದಿ
ಹೊಡೆತದ ಭಾಷೆ ಮಾತ್ರ ಅರಿತುಕೊಳ್ಳುವವರಿಗೆ, ಮಾತಿನ ಪದಗಳು ಅರ್ಥವಾಗುವುದಿಲ್ಲ. ಜಾತ್ಯತೀತತೆಯ ಹೆಸರಿನಲ್ಲಿ ಅವರು ಗಲಭೆಕೋರರಿಗೆ ಸ್ವಾತಂತ್ರ್ಯ ನೀಡಿದ್ದಾರೆ. ಸರ್ಕಾರ ಮೌನವಾಗಿದೆ. ಇಂತಹ ಅರಾಜಕತೆಯನ್ನು ನಿಯಂತ್ರಿಸಬೇಕು ಎಂದು ತಿಳಿಸಿದ್ದಾರೆ.
ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳು ಹಿಂಸಾತ್ಮಕ ತಿರುವು ಪಡೆದ ನಂತರ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅನೇಕ ಕುಟುಂಬಗಳ ಮನೆಗಳು ನಾಶವಾಗಿವೆ. ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕ ವಿಶ್ವಾಸವನ್ನು ಪುನಃಸ್ಥಾಪಿಸಲು ಅವರು ನಿಯಮಿತವಾಗಿ ಗಸ್ತು ತಿರುಗುತ್ತಿದ್ದಾರೆ. ಇದನ್ನೂ ಓದಿ: ವಕ್ಫ್ ಸದ್ಬಳಕೆ ಆಗಿದ್ದರೆ ಮುಸ್ಲಿಮರು ಪಂಕ್ಚರ್ ಹಾಕುತ್ತಿರಲಿಲ್ಲ: ಮೋದಿ
ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶಾಂತವಾಗಿರಲು ಮನವಿ ಮಾಡಿದ್ದಾರೆ. ಜನರು ಹಿಂಸಾಚಾರ ಮಾಡದಂತೆ ಕೇಳಿಕೊಂಡಿದ್ದಾರೆ. ವಕ್ಫ್ ಕಾಯ್ದೆಯನ್ನು ಕೇಂದ್ರ ಸರ್ಕಾರ ತಂದಿದೆಯೇ ಹೊರತು, ರಾಜ್ಯ ಸರ್ಕಾರವಲ್ಲ ಎಂದು ಹೇಳಿದ್ದಾರೆ.