ಬೆಂಗಳೂರು: ಸಮ್ಮಿಶ್ರ ಸರ್ಕಾರದ ವಿರುದ್ಧ ರೆಬೆಲ್ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ತಾಳ್ಮೆಯಿಂದ ಇರುವಂತೆ ಮಾಡಲು ಹೈಕಮಾಂಡ್ ಹಿರಿಯ ನಾಯಕ, ಸೋನಿಯಾ ಗಾಂಧಿ ಆಪ್ತ ಕಾರ್ಯದರ್ಶಿ ಅಹಮದ್ ಪಟೇಲ್ ಅವರಿಂದ ಕರೆ ಮಾಡಿಸಿ ಸಮಾಧಾನ ಪಡಿಸುವ ಯತ್ನ ನಡೆಸಿದೆ.
ಈ ಹಿಂದೆ ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಅವರಿಗೆ ಸಿದ್ದರಾಮಯ್ಯ ಅವರ ನೇರ ನುಡಿಯ ಬಗ್ಗೆ ಪರಿಚಯಿಸಿದ್ದ ಅಹಮದ್ ಪಾಟೇಲ್ ಅವರೇ ಸಿದ್ದರಾಮಯ್ಯ ಅವರನ್ನ ತಾಳ್ಮೆ ವಹಿಸುವಂತೆ ಮನವಿ ಮಾಡಿದ್ದಾರೆ. ಬುಧವಾರ ರಾತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ್ದ ಅಹಮದ್ ಪಾಟೇಲ್ ಅವರು 7 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ.
ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದ ಅಹಮದ್ ಪಟೇಲ್ ಅವರು, ಮೈತ್ರಿ ಸರ್ಕಾರ ವಿರುದ್ಧ ಸಿಟ್ಟಾಗಿರುವ ಕುರಿತು ಪ್ರಶ್ನೆ ಮಾಡಿದ್ದಾರೆ. ಪಟೇಲ್ ಅವರ ಮಾತಿಗೆ ನೇರವಾಗಿ ಉತ್ತರಿಸಿರುವ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನನಗೆ ಎಲ್ಲವನ್ನು ಕೊಟ್ಟಿದೆ. ಅದನ್ನು ನಾನು ಮರೆಯಲ್ಲ, ನನಗೆ ಇಷ್ಟ ಇಲ್ಲದಿದ್ದರೂ ಹೈಕಮಾಂಡ್ಗೆ ಗೌರವ ಕೊಟ್ಟು ಮೈತ್ರಿ ಸರ್ಕಾರಕ್ಕೆ ಒಪ್ಪಿದ್ದು. ದೇವೇಗೌಡರು ತಮ್ಮ ಅಧಿಕಾರಕ್ಕಾಗಿ ನಮ್ಮನ್ನು ಮುಗಿಸಿಬಿಡುತ್ತಾರೆ. ಕಾಂಗ್ರೆಸ್ ನ ದುಸ್ಥಿತಿ ಲಾಭ ಪಡೆದುಕೊಂಡು ದೇವೇಗೌಡರು ಈ ರೀತಿ ನಡೆಸುತ್ತಿದ್ದಾರೆ. ಇದರಿಂದ ನನಗಷ್ಟೇ ಅಲ್ಲ, ಪಕ್ಷದ ಹಲವು ನಾಯಕರು, ಶಾಸಕರಿಗೆ ತೊಂದರೆಯಾಗುತ್ತಿದೆ. ಇದರ ಅಪಾಯವನ್ನೇ ಅರಿತು ನಾನು ಹೆಜ್ಜೆ ಇಡುತ್ತಿದ್ದೇನೆ ಅಷ್ಟೇ ಎಂದು ತನ್ನ ನೋವನ್ನು ತೋಡಿಕೊಂಡಿದ್ದಾರೆ. ಇದನ್ನು ಓದಿ: ಸಿದ್ದರಾಮಯ್ಯ ವಿರುದ್ಧ ದೂರು ನೀಡಿ ಕಾಂಗ್ರೆಸ್ಸಿಗೆ 3 ಷರತ್ತು ವಿಧಿಸಿದ ದೇವೇಗೌಡರು!
ಕಾಂಗ್ರೆಸ್ ನಾಯಕರಿಂದಲೂ ದೂರು: ಪಕ್ಷದ ಹಲವು ನಾಯಕರು ಕೂಡ ನಿಮ್ಮ ವಿರುದ್ಧ ದೂರು ನೀಡುತ್ತಿದ್ದಾರೆ ಎಂಬ ಪಟೇಲರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಆ ರೀತಿ ಯಾವುದು ಇಲ್ಲ. ದೇವೇಗೌಡರ ಜೊತೆಗೆ ಪರಮೇಶ್ವರ್ ಕೂಡ ಸೇರಿಕೊಂಡು ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಏನು ಅಪಾಯ ಆಗಲ್ಲ, ಆದರೆ ಕೆಲ ವಿಚಾರಗಳಲ್ಲಿ ಕಂಟ್ರೋಲ್ ನಲ್ಲಿ ಇಡಬೇಕು ಎಂದಿದ್ದಾರೆ. ಇದನ್ನು ಓದಿ: ಸಿದ್ದರಾಮಯ್ಯ ಹೇಳಿಕೆಯಿಂದ ಸರ್ಕಾರದ ಮೇಲೆ ಪರಿಣಾಮವಿಲ್ಲ – ಮಾಜಿ ಸಿಎಂಗೆ ಡಿಕೆಶಿ ನೇರ ಟಾಂಗ್
ಸದ್ಯ ಸಿದ್ದರಾಮಯ್ಯ ಅವರ ಮಾತನ್ನು ಹೈಕಮಾಂಡ್ ಗಮನಕ್ಕೆ ತರುವ ಕುರಿತು ಅಶ್ವಾಸನೆ ನೀಡಿರುವ ಅಹಮದ್ ಪಟೇಲ್ ಮುಂದಿನ ದಿನಗಳಲ್ಲಿ ಸಮಾಧಾನದಿಂದ ಮುಂದುವರೆಯಿರಿ ಎಂದು ಹೇಳಿದ್ದಾರೆ. ಕೇಂದ್ರ ನಾಯಕರ ಮಧ್ಯ ಪ್ರವೇಶದ ಬಳಿಕ ಸಿದ್ದರಾಮಯ್ಯ ಅವರ ಅಸಮಾಧಾನ ಕೊನೆಗೊಳ್ಳುತ್ತಾ ಎಂಬುವುದನ್ನು ಕಾದು ನೋಡಬೇಕಿದೆ. ಇದನ್ನು ಓದಿ: ಸಮ್ಮಿಶ್ರ ಸರ್ಕಾರದ ಮೇಲೆ ಅಹಿಂದ ಅಸ್ತ್ರ – ಆಪ್ತರೊಂದಿಗೆ ಸಿದ್ದರಾಮಯ್ಯ ಸಭೆ