ಮಂಗಳೂರು: ವಿಪಕ್ಷಗಳ ಪ್ರೇರಣೆಯಿಂದ ಎಡಪಂಥೀಯ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಭಾರತ್ ಬಂದ್ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಸಚಿವರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾರತ್ ಬಂದ್ ಕರೆಗೆ ಬೆಂಬಲ ನೀಡದೆ ಬಂದ್ ಅನ್ನು ವಿಫಲಗೊಳಿಸಿದ್ದಾರೆ. ದೇಶದೆಲ್ಲೆಡೆ ಬಂದ್ಗೆ ಕರೆ ಕೊಟ್ಟವರು ನಿರಾಶರಾಗಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳೂರಿಗೆ ಬಂದರೆ ಪ್ರತಿಭಟನೆ ನಡೆಸುತ್ತೇವೆ ಎಂಬ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಹೇಳಿಕೆಗೆ ತಿರುಗೇಟು ನೀಡಿದರು. ಹರಿಯುವ ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೇ? ಕೇಂದ್ರದ ಗೃಹ ಸಚಿವರು ಮಂಗಳೂರಿಗೆ ಬಂದರೆ ಸಂಭ್ರಮ ಪಡಬೇಕು. ಪೌರತ್ವ ತಿದ್ದುಪಡೆ ಕಾಯ್ದೆ ಬಗ್ಗೆ ಜನರಿಗೆ ಮನವರಿಕೆ ಮಾಡಲು ಅಮಿತ್ ಶಾ ಬರುತ್ತಿದ್ದಾರೆ. ಅವರು ಮನೆ ಬಾಗಿಲಿಗೆ ಬರುವಾಗ ಎಲ್ಲರೂ ಸ್ವಾಗತಿಸುತ್ತಾರೆ ಎಂದುಕೊಂಡಿದ್ದೆ. ಹೀಗಾಗಿ ಐವಾನ್ ಡಿಸೋಜ ಅಷ್ಟು ಸಣ್ಣತನ ಪ್ರದರ್ಶಿಸದೆ ಸ್ವಾಗತಿಸಲಿ ಎಂದು ಸಲಹೆ ನೀಡಿದರು.
ಬಂದ್ಗೆ ನೀರಸ ಪ್ರತಿಕ್ರಿಯೆ:
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ದೇಶಾದ್ಯಂತ ಮುಷ್ಕರಕ್ಕೆ ಎಡಪಂಥೀಯ ಸಂಘಟನೆಗಳು ಕರೆ ನೀಡಿದ್ದರೂ ರಾಜ್ಯದ ಕರಾವಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬಸ್ ಸೇರಿದಂತೆ ಎಲ್ಲಾ ವಾಹನಗಳು ಮುಂಜಾನೆಯಿಂದಲೇ ಸಂಚಾರ ಆರಂಭಿಸಿದ್ದು, ಯಾವುದೇ ವಾಹನಗಳು ಬಂದ್ಗೆ ಬೆಂಬಲ ನೀಡಿಲ್ಲ. ಜೊತೆಗೆ ಶಾಲಾ, ಕಾಲೇಜುಗಳು, ಸರ್ಕಾರಿ ಖಾಸಗಿ ಕಚೇರಿಗಳು, ತರಕಾರಿ ಹಾಗೂ ಮೀನು ಮಾರುಕಟ್ಟೆ ಎಂದಿನಂತೆ ದಿನಚರಿ ನಡೆಸಿತ್ತು. ಆದರೆ ಕೇರಳದಲ್ಲಿ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿರುವುದರಿಂದ ಮಂಗಳೂರಿನಿಂದ ಕಾಸರಗೋಡಿಗೆ ತೆರಳಬೇಕಿದ್ದ ಎಲ್ಲಾ ಕೆಎಸ್ಆರ್ ಟಿಸಿ ಬಸ್ಗಳ ಸಂಚಾವನ್ನು ಸ್ಥಗಿತಗೊಳಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾದ್ಯಂತ ಬಂದ್ಗೆ ಬೆಂಬಲ ಸಿಗದಿದ್ದು ಬಂದ್ ಸಂಪೂರ್ಣ ವಿಫಲವಾಗಿದೆ.