– ಸ್ಟ್ರೆಚರ್ನಲ್ಲಿ ಕೂರಿಸಿ 7 ಕಿ.ಮೀ ನಡೆದ ಟ್ಯಾಕ್ಸಿ ಚಾಲಕರು
ಮಂಗಳೂರು: ಕುಮಾರಪರ್ವತಕ್ಕೆ ಚಾರಣ ತೆರಳಿದ್ದ ಬೆಂಗಳೂರಿನ ಟೆಕ್ಕಿಗಳ ಪೈಕಿ ಜಾರಿ ಬಿದ್ದು ಕಾಲು ಮುರಿದುಕೊಂಡ ಯುವತಿಯನ್ನು ಸ್ಟ್ರೆಚರ್ನಲ್ಲಿ ಮಲಗಿಸಿ ಏಳು ಕಿ.ಮೀ ಹೊತ್ತು ತಂದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ.
ಬೆಂಗಳೂರಿನಿಂದ ಬಂದ ಯುವಕ-ಯುವತಿಯರಿದ್ದ 23 ಮಂದಿಯ ತಂಡ ಮಂಗಳವಾರ ಬೆಳಗ್ಗೆ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಮಾರಪರ್ವತಕ್ಕೆ ಚಾರಣ ಹೊರಟಿತ್ತು. ಪರ್ವತದ ಹಾದಿಯಲ್ಲಿ ಗಿರಿಗದ್ದೆ ಎಂಬಲ್ಲಿ ಯುವತಿಯೊಬ್ಬಳು ಜಾರಿ ಬಿದ್ದಿದ್ದು ಕಾಲು ಮುರಿತಕ್ಕೆ ಒಳಗಾಗಿದ್ದಾಳೆ. ಜೊತೆಗಿದ್ದ ಯುವಕರು ಅಲ್ಲಿದ್ದ ಅರಣ್ಯ ಸಿಬ್ಬಂದಿ ಬಳಿ ನೆರವುಯಾಚಿಸಿದ್ದರು.
ಅರಣ್ಯ ಸಿಬ್ಬಂದಿ ಸುಬ್ರಹ್ಮಣ್ಯದ ಟ್ಯಾಕ್ಸಿ ಚಾಲಕರಿಗೆ ಮಾಹಿತಿ ನೀಡಿದ್ದರು. ಬಳಿಕ ಟ್ಯಾಕ್ಸಿ ಚಾಲಕರು ಕುಕ್ಕೆ ಸುಬ್ರಹ್ಮಣ್ಯದ ಸರ್ಕಾರಿ ಆಸ್ಪತ್ರೆಯಿಂದ ಸ್ಟ್ರೆಚರ್ ಪಡೆದು ಬೆಳಗ್ಗೆ 11 ಗಂಟೆಗೆ ಕುಮಾರ ಪರ್ವತದತ್ತ ತೆರಳಿದ್ದರು. ಗಿರಿಗದ್ದೆಯಿಂದ ರಸ್ತೆ ಸಂಪರ್ಕಿಸುವ ಏಳು ಕಿಮೀ ದೂರದವರೆಗೆ ಯುವತಿಯನ್ನು ಸ್ಟ್ರೆಚರ್ ನಲ್ಲಿ ಮಲಗಿಸಿ ಹೊತ್ತುಕೊಂಡು ಸಂಜೆ ವೇಳೆಗೆ ಮರಳಿ ಬಂದಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಬಂದ ವಾಹನದಲ್ಲಿಯೇ ಯುವತಿಯನ್ನು ಬೆಂಗಳೂರಿಗೆ ಒಯ್ಯಲಾಗಿದೆ. ಯುವತಿಗಾದ ಅವಘಡದಿಂದಾಗಿ ಬೆಂಗಳೂರಿನ ಟೆಕ್ಕಿಗಳ ತಂಡ ಚಾರಣಕ್ಕೆ ಬಂದು ಅರ್ಧ ದಾರಿಯಲ್ಲಿ ಹಿಂತಿರುಗಿ ಹೋಗಿದ್ದಾರೆ. ಮಳೆಗಾಲದ ಅವಧಿಯಲ್ಲಿ ಚಾರಣ ಸೂಕ್ತವಲ್ಲ ಎಂಬ ಸೂಚನೆ ನೀಡಿದ್ದರೂ ಬೆಂಗಳೂರಿನ ಮಂದಿ ಚಾರಣಕ್ಕೆ ಬಂದು ಅರ್ಧ ಸಿಲುಕುತ್ತಿರುವುದು ಪದೇ ಪದೇ ಮರುಕಳಿಸುತ್ತಿದೆ.