– ಗಾಂಜಾ ವ್ಯಸನಿಯಾಗಿದ್ದ ರೌಡಿಶೀಟರ್ ಗಂಡನಿಂದ ಕೃತ್ಯ
ಮಂಗಳೂರು: ತನ್ನ ಪತ್ನಿಯನ್ನೇ ಉಸಿರುಗಟ್ಟಿಸಿ ಕೊಲೆಗೈದು ಶೌಚಾಲಯದೊಳಗೆ ಮೃತದೇಹವನ್ನು ಹಾಕಿದ ಕೃತ್ಯ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಪತಿ ಮನೆಯಲ್ಲಿ ವಾಸವಿದ್ದ, ಮೂಲತಃ ಪುತ್ತೂರಿನ ನಿವಾಸಿ ತಸ್ಲಿಮಾ (23)ಕೊಲೆಯಾದ ಪತ್ನಿ. ತಸ್ಲಿಮಾಳ ಮೃತದೇಹ ಆಕೆಯ ಮನೆಯ ಶೌಚಾಲಯದಲ್ಲಿ ಪತ್ತೆಯಾಗಿದ್ದು, ಪತಿ ಉಮರ್ ಫಾರೂಕ್ ನಾಪತ್ತೆಯಾಗಿದ್ದಾನೆ. ಈಗಾಲೇ ಎರಡು ಮದುವೆಯಾಗಿರುವ ಉಮರ್ ಫಾರೂಕ್ ಕಳೆದ ವರ್ಷ ತಸ್ಲಿಮಾಳನ್ನು ಮೂರನೇ ಮದುವೆಯಾಗಿದ್ದಾನೆ.
ಗಾಂಜಾವ್ಯಸನಿಯಾಗಿರುವ ಈತ ಗಾಂಜಾ ಮಾರಾಟದ ವ್ಯವಹಾರ ಮಾಡುತ್ತಿದ್ದ. ಸೋಮವಾರ ರಾತ್ರಿಯೂ ಗಾಂಜಾದ ಅಮಲಿನೊಂದಿಗೆ ಮನೆಗೆ ಬಂದಿದ್ದ ಉಮರ್ ಫಾರೂಕ್ ಪತ್ನಿಯೊಂದಿಗೆ ಗಲಾಟೆ ನಡೆಸಿದ್ದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಲಾಟೆಯ ಬಳಿಕ ತಸ್ಲಿಮಾಳಿಗೆ ಹಲ್ಲೆ ನಡೆಸಿ ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿ ಶೌಚಾಲಯದಲ್ಲಿ ಮೃತದೇಹವನ್ನು ಹಾಕಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಆರೋಪಿ ಉಮರ್ ಫಾರೂಕ್ ಬೆಳ್ತಂಗಡಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಬೆಳ್ತಂಗಡಿ ಠಾಣೆಯಲ್ಲಿ 4 ಪ್ರಕರಣ ಸೇರಿದಂತೆ ಜಿಲ್ಲೆಯ ವೇಣೂರು, ಚಿಕ್ಕಮಗಳೂರು ಪೊಲೀಸ್ ಠಾಣೆಗಳಲ್ಲಿ ಒಟ್ಟು 8 ಪ್ರಕರಣಗಳು ಉಮರ್ ಮೇಲಿದೆ. ಈ ಹಿಂದಿನ ಇಬ್ಬರ ಪತ್ನಿಯರಿಗೂ ಈತ ದೈಹಿಕ ಹಿಂಸೆ ನೀಡುತ್ತಿದ್ದ ಕಾರಣ ಅವರಿಬ್ಬರೂ ಈತನನ್ನು ಬಿಟ್ಟು ದೂರವಾಗಿದ್ದಾರೆ. ಇದೀಗ ಮೂರನೇ ಪತ್ನಿ ತಸ್ಲಿಮಾಳಿಗೂ ಪ್ರತಿನಿತ್ಯ ಈತ ಹಲ್ಲೆ ನಡೆಸುತ್ತಿದ್ದ. ಅದರಂತೆ ಸೋಮವಾರ ರಾತ್ರಿಯೂ ಹಲ್ಲೆ ನಡೆಸುತ್ತಿದ್ದ ಎಂದು ಸ್ಥಳೀಯರು ಹೆಚ್ಚು ಗಮನಕೊಡಲಿಲ್ಲ.
ಉಮರ್ ಫಾರೂಕ್ ಹಲ್ಲೆ ನಡೆಸುತ್ತಾ ಮೊದಲಿಗೆ ಆಕೆಯ ತಲೆಯನ್ನು ಗೋಡೆಗೆ ಗುದ್ದಿಸಿ, ಬಳಿಕ ಉಸಿರುಗಟ್ಟಿಸಿ ಕೊಲೆ ನಡೆಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ, ಸೇರಿದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಯಾಗಿ ಬಲೆ ಬೀಸಿದ್ದಾರೆ.