ಉಡುಪಿ| ದೈವದ ಕಾರಣಿಕ – 28 ವರ್ಷಗಳ ಬಳಿಕ ಮನೆಗೆ ಮರಳಿ ಬಂದ ಮಗ

Public TV
1 Min Read
daiva udupi

ಉಡುಪಿ: ಮನೆ ಬಿಟ್ಟು ಹೋದ ಮಗ, ಮೂರು ದಶಕಗಳ ನಂತರ ಮನೆಗೆ ಹಿಂತಿರುಗಿದ್ದಾನೆ. ಗುರುತೇ ಸಿಗದ ಮಗನನ್ನು ಅಪ್ಪ ಕಂಡು ಹಿಡಿದದ್ದೇ ರೋಚಕ. ಈ ಘಟನೆ ನಡೆದಿದ್ದು ಉಡುಪಿ (Udupi) ಜಿಲ್ಲೆಯ ಪಡುಕುಡೂರು ಎಂಬ ಗ್ರಾಮದ ಹಳ್ಳಿಯಲ್ಲಿ. ದೈವದ ಕಾರಣಿಕದಂತೆಯೇ ಎಲ್ಲಾ ನಡೆದಿದೆ ಎನ್ನಲಾಗಿದೆ.

ಕರಾವಳಿಯ ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ ಜಿಲ್ಲೆಯಲ್ಲಿ ದೈವಗಳ ಪವಾಡವನ್ನು ಯಾರು ಅಲ್ಲಗಳಿಯುವುದಿಲ್ಲ. ಜನ ಇಟ್ಟ ನಂಬಿಕೆ ಮತ್ತು ಶ್ರದ್ಧೆಗೆ ತಕ್ಕ ಪ್ರತಿಫಲ ದೈವಗಳಿಂದ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಹಲವಾರು ಸಾಕ್ಷಿಗಳಿವೆ. ಇದನ್ನೂ ಓದಿ: ಕ್ರಿಸ್‌ಮಸ್ ಹಬ್ಬ – ಕೋಲಾರದ ಮೆಥೋಡಿಸ್ಟ್ ಚರ್ಚ್‌ನಲ್ಲಿ ದೀಪಾಲಂಕಾರ

ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಪಡುಕುಡೂರು ಎಂಬ ಗ್ರಾಮದ ಕಥೆಯಿದು. ಇಲ್ಲಿನ ಸುಂದರ ಪೂಜಾರಿ ಎಂಬವರಿಗೆ ಮೂರು ಮಕ್ಕಳಲ್ಲಿ ಬೋಜ ಪೂಜಾರಿ ಒಬ್ಬ ಗಂಡು ಸಂತಾನ. ಆತ ಯಾವುದೋ ಒಂದು ಕಾರಣಕ್ಕೆ ಮನೆ ಬಿಟ್ಟು ಹೋಗುತ್ತಾನೆ. ಹೋದವ ಬರೋಬ್ಬರಿ 28 ವರ್ಷ ಮನೆ ಕಡೆ ತಲೆ ಹಾಕಿಲ್ಲ, ಸಂಪರ್ಕವೇ ಇಲ್ಲ. ಬದುಕಿದ್ದಾನೋ ಸತ್ತಿದ್ದಾನೋ ಎಂಬ ಮಾಹಿತಿಯೂ ಕುಟುಂಬಕ್ಕಿಲ್ಲ. ತಂದೆ-ತಾಯಿ, ಸೋದರಿಯರು ದೈವ ದೇವರ ಮುಂದೆ ಮಾಡಿದ ಪ್ರಾರ್ಥನೆ, ಹೊತ್ತ ಹರಕೆ ಈಗ ಫಲಕೊಟ್ಟಿದೆ. ಮನೆ ಮಗ ಬೋಜ ಪೂಜಾರಿ ಮನೆಗೆ ಬಂದಿದ್ದಾನೆ.

80ರ ಹರೆಯದ ತಂದೆಯ ಬೇಸರ ಕಳೆದು ಮೊಗದಲ್ಲಿ ನಗು ಮೂಡಿದೆ. ಪಡುಕುಡೂರಿನ ಭದ್ರಕಾಳಿ, ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಗುಡಿಗೆ ತನ್ನ 12ನೇ ವಯಸ್ಸಿನಿಂದ ಇಂದಿನವರೆಗೆ ಸಲ್ಲಿಸುತ್ತಿರುವ ಚಾಕರಿಗೆ ಫಲ ಸಿಕ್ಕಿದೆ ಎಂದು ಮನೆ, ಊರು ಸಂಭ್ರಮಪಟ್ಟಿದೆ. ಇದನ್ನೂ ಓದಿ: ಶಿವಣ್ಣಗೆ ಇಂದು ಶಸ್ತ್ರಚಿಕಿತ್ಸೆ – ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಅಭಿಮಾನಿಗಳಿಂದ ಪೂಜೆ

ಮಾತು ಮತ್ತು ದೈಹಿಕವಾಗಿ ಸಂಪೂರ್ಣ ಬದಲಾಗಿದ್ದ ಬೋಜ ಪೂಜಾರಿಯನ್ನು ತಂದೆ ಪತ್ತೆ ಹಚ್ಚಿದ್ದು, ಕೈಯಲ್ಲಿರುವ ಒಂದು ಗುಳ್ಳೆಯಿಂದ. ಮದುವೆಯಾಗಿ ಪತ್ನಿ, ಮಗಳ ಜೊತೆ ಹುಬ್ಬಳ್ಳಿಯಲ್ಲಿ ಸಂಸಾರ ಮಾಡಿಕೊಂಡಿರುವ ಬೋಜ ಅವರಿಗೆ ಮತ್ತೆ ತನ್ನ ಹುಟ್ಟೂರಿನ ಕಡೆ ಒಲವು ಮೂಡಿದೆ. ಊರಿಗೆ ಬಂದು ನೆಲೆ ಕಂಡುಕೊಳ್ಳುವ ಆಸೆ ಹುಟ್ಟಿದೆ.

Share This Article