ಮಡಿಕೇರಿ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ, ಕೊಡಗಿನ ತಲಕಾವೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕರ್ನಾಟಕ ಹಾಗೂ ತಮಿಳುನಾಡಿನ ಜನತೆಗೆ ಅನುಕೂಲ ಆಗುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆ ಆದಷ್ಟು ಬೇಗಾ ಆಗುವಂತೆ ಅಗ್ರಹಿಸಿ, ಕರ್ನಾಟಕ ಕಾಂಗ್ರೆಸ್ ಪಕ್ಷವು ಇದೇ ಜನವರಿ 9 ರಿಂದ 19ರವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲು ನಿರ್ಧಾರ ಮಾಡಿದೆ. ಈ ನಿಟ್ಟಿನಲ್ಲಿ ಡಿ.ಕೆ ಶಿವಕುಮಾರ್ ನೇತೃತ್ವ ದಲ್ಲಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ನಿಜವಾದ ಹಿಂದೂ ಅಲ್ಲ: ನಾರಾಯಣಸ್ವಾಮಿ ವಾಗ್ದಾಳಿ
ಡಿಕೆಶಿ ಅವರ ಅಜ್ಜಿ ಮೃತಪಟ್ಟು ಐದು ದಿನಗಳಾಗಿರುವ ಹಿನ್ನೆಲೆಯಲ್ಲಿ ಕಾವೇರಿ ಕುಂಡಿಕೆಯಿಂದ ದೂರದಲ್ಲೇ ನಿಂತು ಮಹಾ ಸಂಕಲ್ಪ ಪೂಜೆ ಹಾಗೂ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ್ದಾರೆ. ತಲಕಾವೇರಿ ಧಾರ್ಮಿಕ ನಂಬಿಕೆಯಂತೆ ಸೂತಕ ಇದ್ದವರು 12 ದಿನಗಳವರೆಗೆ ಕುಂಡಿಕೆ ಬಳಿ ಬರುವಂತಿಲ್ಲ. ಹೀಗಾಗಿ ತೀರ್ಥ ಕುಂಡಿಕೆಯಿಂದ ದೂರದಲ್ಲೇ ನಿಂತು ಪೂಜೆ ಸಲ್ಲಿಸಿದ್ದಾರೆ.
ವಿಶೇಷ ಪೂಜೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಎಂಎಲ್ಸಿ ಚುನಾವಣೆ ಪರಾಜಿತ ಅಭ್ಯರ್ಥಿ ಮಂಥರ್ ಗೌಡ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪೂಜೆಯಲ್ಲಿ ಭಾಗಿಯಾಗಿದ್ದಾರೆ.