ಬೆಂಗಳೂರು: ಬಿಜೆಪಿಯವರು ಮೆಂಟಲ್ ಗಿರಾಕಿಗಳು. ನಮ್ಮ ಪಕ್ಷದ ವಿಚಾರದಲ್ಲಿ ತಲೆ ಹಾಕಲು ಅವರು ಯಾರು? ಮೊದಲು ಅವರ ತಟ್ಟೆಯಲ್ಲಿ ಬಿದ್ದಿರೋ ಹೆಗ್ಗಣ ಎತ್ತಿಹಾಕಿ, ಕ್ಲೀನ್ ಮಾಡಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು ನಮ್ಮ ಪಕ್ಷದ ವಿಚಾರ ಬಿಜೆಪಿಯವರಿಗೆ ಯಾಕೆ ಬೇಕು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮಂಗಳಮುಖಿ ಪೂಜಾರಿ ನಿಗೂಢ ಸಾವಿಗೆ ಟ್ವಿಸ್ಟ್- ಸಾವಿಗೂ ಮುನ್ನ ಮಾಡಿದ್ದ ಸೆಲ್ಫಿ ವಿಡಿಯೋ ಬಯಲು!
ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಇದೆ ಎಂಬ ಬಿಜೆಪಿ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಅರ್ಧಕ್ಕೇ ಭಾಷಣ ಮುಗಿಸಿದರು. ಸಿದ್ದರಾಮಯ್ಯ ಅವರು ಪುನೀತ್ ನಮನ ಕಾರ್ಯಕ್ರಮಕ್ಕೆ ಹೋಗಬೇಕಾಗಿದ್ದರಿಂದ ಚಿಕ್ಕದಾಗಿ ಬೇಗ ಭಾಷಣ ಮುಗಿಸಿದರು. ಅದನ್ನು ಮೊದಲೇ ಹೇಳಿದ್ದಾಗಿ ಸಿದ್ದರಾಮಯ್ಯನವರೇ ಸ್ಪಷ್ಟಪಡಿಸಿದ್ದಾರೆ. ಆಮೇಲೆ ನಾನು ಮಾತನಾಡಿದೆ. ಅವರು ಯಾರೋ ಬಿಜೆಪಿಯವರು ಏನೇನೋ ಮಾತಾಡ್ತಾರೆ ಅಂದರೆ ಅದಕ್ಕೆಲ್ಲ ಉತ್ತರ ಕೊಡೋಕೆ ಹೋಗಲ್ಲ. ಏನಾದರೂ ಮುಖ್ಯಮಂತ್ರಿಗಳು ಕೇಳಿದರೆ ಉತ್ತರ ಕೊಡುತ್ತೇನೆ ಎಂದರು.
ಪಕ್ಷದ ಅಧ್ಯಕ್ಷನಾಗಿ ಪಕ್ಷದ ಕಾರ್ಯಕರ್ತರ ಮೇಲೆ ನಿಗಾ ಇಡುವುದು, ನಿಯಂತ್ರಣದಲ್ಲಿಡುವುದರಲ್ಲಿ ತಪ್ಪೇನೂ ಇಲ್ಲ. ಕೆಲವೊಮ್ಮೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಚಿಕ್ಕವರಿರಲಿ, ದೊಡ್ಡವರಿರಲಿ ಅವರನ್ನು ಸಂಭಾಳಿಸಬೇಕಾಗುತ್ತದೆ. ಕೆಲವೊಮ್ಮೆ ಕಟ್ಟುನಿಟ್ಟಾಗಿ ವರ್ತಿಸಬೇಕಾಗುತ್ತದೆ. ಕಠಿಣವಾಗಿ ಮಾತಾಡಬೇಕಾಗುತ್ತದೆ. ಆತ್ಮೀಯವಾಗಿ, ಪ್ರೀತಿಯಿಂದಲೂ ನೋಡಬೇಕಾಗುತ್ತದೆ. ಅವರು ನಮ್ಮ ಪಕ್ಷದವರು, ನಮ್ಮವರು, ನಮ್ಮ ಮನೆಯ ಮಕ್ಕಳು ಇದ್ದಂತೆ. ಬೈದರೂ ಪ್ರೀತಿಯಿಂದ ನೋಡುತ್ತಾರೆ. ಗದರಿದರೂ ಪ್ರೀತಿಸುತ್ತಾರೆ. ಅವರನ್ನು ಗದರುತ್ತೇನೆ, ಪ್ರೀತಿಸುತ್ತೇನೆ, ಸಂತೋಷದಿಂದ ನೋಡಿಕೊಳ್ಳುತ್ತೇನೆ. ಇದು ನಮ್ಮ ಮನೆಯ ವಿಷಯ. ಇದು ನನ್ನ ರೂಢಿಗತ ವರ್ತನೆ. ಅದನ್ನು ಹೊಸದಾಗಿ ಏನೂ ಬದಲಾವಣೆ ಮಾಡಲು ಆಗುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ‘ಜೈ ಭೀಮ್’ ನಟ ಸೂರ್ಯಗೆ ಜೀವ ಬೆದರಿಕೆ- ನಟನ ಮನೆಗೆ ಪೊಲೀಸ್ ಭದ್ರತೆ
ಜಮೀರ್ ಅಹಮದ್ ಖಾನ್ ಅವರು ನಿನ್ನೆ ಕಾರ್ಯಕ್ರಮಕ್ಕೆ ಬಂದಿಲ್ಲ ಅಂತಾ ಇಷ್ಟೆಲ್ಲ ಪರಿಸ್ಥಿತಿ ನಿರ್ಮಾಣ ಆಯಿತಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ಪಾಪ ಅವರೆಲ್ಲೋ ದಿಲ್ಲಿಯಲ್ಲಿ ಇದ್ದರು. ಅವರ ಕೆಲಸ ಅವರು ಮಾಡುತ್ತಾ ಇದ್ದಾರೆ. ಎಲ್ಲರಿಗೂ ಬೆಂಬಲಿಗರು ಇದ್ದಂತೆ ಅವರಿಗೂ ಇದ್ದಾರೆ. ಅದನ್ನು ಇದಕ್ಕೆ ತಳಕು ಹಾಕೋದು ಸರಿಯಲ್ಲ. ಬಿಜೆಪಿಯವರು ಏನೋ ಹೇಳ್ತಾರೆ ಅಂತ ನಾನ್ಯಾಕೆ ಉತ್ತರ ಕೊಡೋಕೆ ಹೋಗಲಿ. ಮೊದಲು ಅವರ ತಟ್ಟೇಲಿರೋ ಹೆಗ್ಗಣ ಕ್ಲೀನ್ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.