ನವದೆಹಲಿ: ಕಾನೂನು ಮತ್ತು ಸಮಯ ಉತ್ತರ ಕೊಡುತ್ತೆ ಅಂತಾ ಮೊದಲೇ ಹೇಳಿದ್ದೆ. ನ್ಯಾಯಬದ್ಧ ವ್ಯವಹಾರಗಳನ್ನು ಮಾಡಿದ್ದೇವೆ, ಹೀಗಾಗಿ ನ್ಯಾಯವಾಗಿ ಹೋರಾಡಿದ್ದೇವೆ. ರಾಜ್ಯದ ಜನರ ಪ್ರೀತಿ, ಪೂಜೆ, ಹರಕೆಗೆ ಈಗ ಫಲ ಸಿಕ್ಕಿದೆ ಎಂದು ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ದೆಹಲಿ ಹೈಕೋರ್ಟ್ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಇಡಿ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನ್ಯಾಯಾಲಯದ ಬಗ್ಗೆ ನಂಬಿಕೆ ಇದೆ. ಇಡಿ ಅವರು ಪ್ರಯತ್ನ ಮಾಡ್ತಿದ್ದಾರೆ. ಅವರು ತಪ್ಪು ಎಂದು ನಾವು ಹೇಳುವುದಿಲ್ಲ. ರಾಜ್ಯದ ಜನರು ಪ್ರೀತಿಯಿಂದ ಪೂಜೆ, ಹರಿಕೆ, ಹೋರಾಟ ಮಾಡಿದ್ದಾರೆ. ಜನರ ಪೂಜೆಗೆ ಈಗ ಫಲ ಸಿಕ್ಕಿದೆ. ನ್ಯಾಯಬದ್ಧ ವ್ಯವಹಾರಗಳನ್ನು ಮಾಡಿದ್ದೇವೆ. ಹೀಗಾಗೀ ಪ್ರತಿ ಹಂತದಲ್ಲೂ ನ್ಯಾಯಬದ್ಧವಾಗಿದ್ದೇವೆ. ಆದ್ದರಿಂದ ನಮಗೆ ನ್ಯಾಯಾಲಯಗಳಿಂದ ನ್ಯಾಯ ಸಿಕ್ಕಿದೆ ಎಂದು ಹೇಳಿದರು. ಇದನ್ನೂ ಓದಿ:ಡಿಕೆಶಿಗೆ ಬಿಗ್ ರಿಲೀಫ್- ಇಡಿ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್
ಮಾಜಿ ಗೃಹ ಸಚಿವ ಅನ್ನೊ ಉಲ್ಲೇಖಕ್ಕೆ ಪ್ರತಿಕ್ರಿಯಿಸಿ, ಮಾಧ್ಯಮಗಳಿಗೆ ಅನುಕೂಲ ಆಗುವಂತೆ ಇಡಿ ಸುಳ್ಳು ಹೇಳಿದೆ. ನಮ್ಮ ಕುಟುಂಬದ 5-6 ಖಾತೆ ಇರಬೇಕು ಅಷ್ಟೇ. ಆದರೆ ನೂರಾರು ಖಾತೆ ಇದೆ ಅನ್ನೊಂದು ಸುಳ್ಳು ಮಾತು. ನಮಗೆ ತೊಂದರೆ ಕೊಡಬೇಕು ಎಂದು ಸುಖಾ ಸುಮ್ಮನೆ ಆರೋಪ ಮಾಡಿದ್ದಾರೆ. ಇದರ ಬಗ್ಗೆ ನಾನು ಕಾಮೆಂಟ್ ಮಾಡಲ್ಲ. ಇಡಿ ಅರ್ಜಿಗೆ ಉತ್ತರ ಕೊಡಲು ಸಿದ್ಧವಾಗಿದ್ದೇವೆ. ಆದರೆ ಸುಪ್ರೀಂ ಕೋರ್ಟ್ ಇದಕ್ಕೆ ನ್ಯಾಯ ನೀಡಿದೆ ಎಂದು ತಿಳಿಸಿದರು.
ಉಪಚುನಾವಣೆ ಬಗ್ಗೆ ಮಾತನಾಡಿ, ಚುನಾವಣೆ ಟಿಕೆಟ್ ಬಗ್ಗೆ ವರಿಷ್ಠರು ನೋಡಿಕೊಳ್ಳುತ್ತಾರೆ. ಪಾರ್ಟಿ ಹೇಳಿದ ಕೆಲಸ ನಾನು ಮಾಡುತ್ತೇನೆ. ಹೊಸಕೋಟೆಗೆ ಪ್ರಚಾರಕ್ಕೆ ಹೋಗುವ ವಿಚಾರದ ಬಗ್ಗೆ ಟೈಮ್ ಬಂದಾಗ ಹೇಳುತ್ತೇನೆ. ಚುನಾವಣೆ ಉಸ್ತುವಾರಿ ಬಗ್ಗೆ ನಾಯಕರ ಹತ್ತಿರ ಚರ್ಚೆ ಮಾಡುತ್ತೇನೆ ಎಂದರು. ಹಾಗೆಯೇ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೂ ಪ್ರತಿಕ್ರಿಯಿಸಿದರು. ಎಚ್ಡಿಕೆ ಅವರು ಕಾಂಗ್ರೆಸ್, ಬಿಜೆಪಿಯನ್ನು ಉಪಚುನಾವಣೆಯಲ್ಲಿ ಸೋಲಿಸುತ್ತೇವೆ ಎಂದಿದ್ದು ಅವರ ಪಕ್ಷದ ಒಳಿತಿಗಾಗಿ. ಅವರ ಪಕ್ಷದಕ್ಕಾಗಿ ಅವರು ಮಾತನಾಡುತ್ತಾರೆ ಬಿಡಿ ಎಂದು ಪ್ರತಿಕ್ರಿಯಿಸಿದರು.
ರಾಜಕೀಯವಾಗಿ ಅನರ್ಹ ಶಾಸಕರಿಗೂ ನಮಗೂ ಸಂಬಂಧವಿಲ್ಲ. ಆದರೆ ಸ್ನೇಹಿತರಾಗಿ ಎಲ್ಲರಂತೆ ಅವರನ್ನೂ ನಾನು ಪ್ರೀತಿಸುತ್ತೇನೆ. ಇದರ ಬಗ್ಗೆ ಹೆಚ್ಚು ಮಾತು ಬೇಡ ಎಂದರು. ಬಳಿಕ ಪತ್ನಿ ಮತ್ತು ತಾಯಿ ಕೇಸ್ ಇದೆ. ನ. 20ಕ್ಕೆ ಇಡಿ ದಿನಾಂಕ ಕೊಟ್ಟಿದ್ದಾರೆ. ಅದರ ಬಗ್ಗೆ ಗಮನ ಹರಿಸಬೇಕಿದೆ. ಐಟಿಯಿಂದ 40ಕ್ಕು ಹೆಚ್ಚು ನೋಟಿಸ್ ಬಂದಿದೆ. ಅದಕ್ಕೆ ಉತ್ತರ ಕೊಡಬೇಕಿದೆ. ಅದಕ್ಕಾಗಿ ತಯಾರಿ ಮಾಡಿಕೊಳ್ಳಬೇಕು. ಸದ್ಯ ಹಿಂದುಗಡೆ ಬೆನ್ನು ನೋವು ಕಡಿಮೆ ಆಗಿದೆ. ಆದರೆ ಬಿಪಿ ಕಂಟ್ರೋಲ್ ಆಗಿಲ್ಲ ಎಂದು ಆರೋಗ್ಯದ ಬಗ್ಗೆ ತಿಳಿಸಿದರು.