ಧಾರವಾಡ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೊಟ್ಟಿರುವ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆಯನ್ನು ಕೊಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉತ್ತರಕೊಟ್ಟರು.
ಸಿದ್ದರಾಮಯ್ಯ ಶಿರವಸ್ತ್ರವನ್ನು ಹಿಜಬ್ಗೆ ಹೋಲಿಸಿದ್ದಾರೆ ಎಂದು ಎಲ್ಲಕಡೆ ವಿವಾದ ಸೃಷ್ಟಿಯಾಗಿದೆ. ಈ ಕುರಿತು ಪ್ರತಿಕ್ರಿಯೆ ಕೊಡಲು ಇಷ್ಟಪಡದ ಡಿಕೆಶಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಸಿದ್ದರಾಮಯ್ಯ ಅವರು ಏನ್ ಮಾತಾಡಿದ್ದಾರೆ ಅದಕ್ಕೆ ಅವರೇ ಉತ್ತರ ಕೊಡ್ತಾರೆ. ಸಿದ್ದರಾಮಯ್ಯ ಅವರಿಗೆ ಧರ್ಮಗುರುಗಳ ಬಗ್ಗೆ ಗೌರವವಿದೆ. ಈ ಹಿಂದೆ ಸಿಎಂ ಆಗಿದ್ದಾಗ ಹಲವು ಧರ್ಮಗುರುಗಳಿಗೆ ಸಹಾಯ ಮಾಡಿದ್ದಾರೆ. ಅವರು ಈಗಾಗಲೇ ಟ್ವೀಟ್ ಮಾಡಿದ್ದಾರೆ, ಅವರೇ ಉತ್ತರ ಕೊಡ್ತಾರೆ ಎಂದರು. ಇದನ್ನೂ ಓದಿ: ಹಿಜಬ್ ವಿವಾದ ಸೃಷ್ಟಿ ಮಾಡಿದ್ದು ಕಾಂಗ್ರೆಸ್, ದೇಶದ್ರೋಹಿ PFI, SDPI ಸಂಘಟನೆಗಳು: ಎಂ.ಪಿ.ರೇಣುಕಾಚಾರ್ಯ
ನ್ಯಾಯಾಲಯದ ತೀರ್ಪನ್ನು ಸರಿಯಲ್ಲ ಅಂತಾ ಹೇಳಲ್ಲ. ಕೋರ್ಟ್ ತೀರ್ಪನ್ನು ಪಾಲನೆ ಮಾಡಬೇಕು. ಸ್ವಾಮೀಜಿಗಳ ಶಿರವಸ್ತ್ರದ ಬಗ್ಗೆ ಸಿದ್ದರಾಮಯ್ಯ ಕೊಟ್ಟ ಹೇಳಿಕೆಗೆ ಅವರೇ ಉತ್ತರ ಕೊಡ್ತಾರೆ. ಅವರಿಗೆ ಎಲ್ಲ ಧರ್ಮ, ಸ್ವಾಮಿಗಳ ಮೇಲೆ ಗೌರವವಿದೆ. ಅವರು ಸಿಎಂ ಆಗಿದ್ದಾಗ ಎಲ್ಲ ಧರ್ಮಗಳಿಗೂ ಬೇಕಾದಷ್ಟು ಸಹಾಯ ಮಾಡಿದ್ದಾರೆ. ಅವರು ಏನು ಮಾತಾಡಿದ್ದಾರೋ ಅದಕ್ಕೆ ಅವರೇ ಉತ್ತರ ಕೊಡ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನವೇ ಬೈಬಲ್, ಕುರಾನ್, ಭಗವದ್ಗೀತೆ. ಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಹಿಜಬ್ ವಿಚಾರವಾಗಿ ಕೆಲವರು ಸುಪ್ರೀಂಕೋರ್ಟ್ಗೆ ಹೋಗಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ ಅದಕ್ಕೆ ಹೋಗಿದ್ದಾರೆ. ಈಗಾಗಲೇ ಹೈಕೋರ್ಟ್ ತೀರ್ಪು ಇರೋದ್ರಿಂದ ಪಾಲಿಸಬೇಕು ಎಂದು ತಿಳಿಸಿದರು.
ಹಿಜಬ್ ಧರಿಸಿದ್ರೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಅನುಮತಿ ನಿರಾಕರಣೆ ಸುತ್ತೋಲೆ ವಿಚಾರವಾಗಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳಿಗೆ ಬುದ್ಧಿವಾದ ಹೇಳಬೇಕು. ಧರ್ಮಗುರುಗಳೊಂದಿಗೆ ಮಾತನಾಡಬೇಕು. ವಿದ್ಯಾರ್ಥಿಗಳ ಭವಿಷ್ಯ ಮುಖ್ಯ. ಯಾರು-ಯಾವ ಕಾಲದಲ್ಲಿ ಏನ್ ಮಾಡ್ಬೇಕು. ಹೇಗೆ ಮಾಡ್ಬೇಕೋ ಮಾಡಿದ್ದಾರೆ ಎಂದು ಉತ್ತರಿಸಿದರು. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ನಾಡಿನ ಮಠಾಧೀಶರ ಕ್ಷಮೆ ಕೇಳಬೇಕು: ಅಭಿನವ ಮಂಜುನಾಥ ಶ್ರೀ
ವಿದ್ಯಾಭ್ಯಾಸ ಬಹಳ ಮುಖ್ಯ. ಹಿಜಬ್ ವಿಚಾರದಲ್ಲಿ ಮಕ್ಕಳಲ್ಲಿ ಮನವರಿಕೆ ಮಾಡಬೇಕು. ತಂದೆ-ತಾಯಿಗಳು, ಗುರುಗಳು ಮಕ್ಕಳ ಮನವೊಲಿಸಬೇಕು. ಗುರುಗಳು ಹೇಳಿದರೆ ಮಕ್ಕಳು ಕೇಳ್ತಾರೆ. ಕಾಂಗ್ರೆಸ್ ಪಕ್ಷ ಸಂವಿಧಾನದಲ್ಲಿ ಇರುವ ವಿಚಾರಗಳಿಗೆ ಬೆಲೆ ಕೊಡುತ್ತೆ ಎಂದು ವಿವರಿಸಿದರು.