ಬೆಂಗಳೂರು: ಪಕ್ಷಾಂತರ ಕಾಯ್ದೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಸ್ತಾಪ ಮಾಡುತ್ತಿದ್ದ ವೇಳೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ನಾಯಕರ ವಿರುದ್ಧ ಸಚಿವ ಡಿ.ಕೆ ಶಿವಕುಮಾರ್ ಅವರು ಏಕಾಏಕಿ ಗರಂ ಆದರು. ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟ ಮೇಲೆ ಇನ್ನೇನು ಬೇಕು ನಿಮಗೆ ಎಂದು ಕಿಡಿಕಾರಿದರು.
ವಿಶ್ವಾಸಮತಯಾಚನೆಯ ಚರ್ಚೆಯಲ್ಲಿ ಸಿದ್ದರಾಮಯ್ಯನವರು ಮಾತನಾಡುತ್ತಾ, ಮೊದಲೆಲ್ಲ ಪಕ್ಷಾಂತರ ಕಾಯ್ದೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. 1967 ರಲ್ಲಿ ಗಯಾಲಾಲ್ ಅವರು ಮೂರು ಸಲ ಪಕ್ಷಾಂತರ ಮಾಡಿದ್ದರು. ಆಗಿನಿಂದ ಇಡೀ ದೇಶ ಪಕ್ಷಾಂತರ ಕಾಯ್ದೆ ಬಗ್ಗೆ ಗಂಭೀರವಾಗಿ ಚರ್ಚೆ ಶುರು ಮಾಡಿತ್ತು ಎಂದರು.
ಈ ವೇಳೆ ಸಿದ್ದರಾಮಯ್ಯಗೆ ಬಿಜೆಪಿ ಶಾಸಕ ಮಾಧುಸ್ವಾಮಿ ಅಡ್ಡಿ ಪಡೆಸಿದರು. ಆಗ ಸಿಟ್ಟಿಗೆದ್ದ ಡಿಕೆಶಿ ಅವರು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟ ಮೇಲೆ ಇನ್ನೇನು ಬೇಕು. ನಿಮ್ಮ ಸಲಹೆಗಳು ನಮಗೆ ಬೇಕಿಲ್ಲ. ನಮ್ಮ ಶಾಸಕರನ್ನು ಕರೆದುಕೊಂಡು ಹೋಗಿ ಬೀದಿ ಪಾಲು ಮಾಡಿದ್ದೀರಾ ಎಂದು ಹರಿಹಾಯ್ದರು.
ಅಲ್ಲದೆ ಸಿಎಂ ಸ್ಥಾನದಲ್ಲಿ ಯಡಿಯೂರಪ್ಪ ಅವರು ಇದ್ದಾಗ ಏನೂ ಮಾಡಿದ್ದಾರೆ? ನಮ್ಮ ನಾಯಕರನ್ನು ನಿಮ್ಮ ಕಡೆ ಮಾಡಿಕೊಂಡಿದ್ದೀರಾ. ಆ ನಾಯಕರೆಲ್ಲಾ ಇಲ್ಲೇ ಇದ್ದಾರೆ ನೋಡಿ. ನಿಮ್ಮ ಮುಖಕ್ಕೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಭಾಷಣಕ್ಕೆ ಮಾಧುಸ್ವಾಮಿ ಅಡ್ಡಿ ಪಡಿಸಿ, ವಿಶ್ವಾಸ ಮತ ಮುಗಿದ ಮೇಲೆ ಚರ್ಚೆಗೆ ಅವಕಾಶ ಕೊಡಿ ಎಂದು ಸ್ಪೀಕರ್ ಬಳಿ ಮನವಿ ಮಾಡಿದರು. ಈ ವೇಳೆ ನಿಮಗೂ ಮಾತನಾಡಲು ಅವಕಾಶ ಕೊಡುತ್ತೇನೆ ಎಂದು ಸ್ಪೀಕರ್ ಹೇಳಿದರು. ಇದೇ ವೇಳೆ ಬಿಜೆಪಿಯ ಕೆ.ಜಿ ಬೋಪಯ್ಯ ಅವರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಅಧಿವೇಶನ ಒಂದು ಕ್ಷಣ ಗದ್ದಲದ ಗೂಡಾಯಿತು.