ಸಿಲಿಂಡರ್ ಸ್ಫೋಟಕ್ಕೆ ಮನೆ ಛಿದ್ರ ಛಿದ್ರ – ಮೂವರು ಗಂಭೀರ

Public TV
1 Min Read
Chikkaballapur

ಚಿಕ್ಕಬಳ್ಳಾಪುರ: ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಏಕಾಏಕಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಮುನ್ಸಿಪಾಲ್ ಕಾಲೇಜಿನ ಮುಂಭಾಗ ನಡೆದಿದೆ.

ನಗರದ ಫರ್ಜಾನಾ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆ ಮಾಲೀಕರಾದ ಫರ್ಜಾನಾ ಕೆಲಸಕ್ಕೆ ತೆರಳಿದ್ದ ವೇಳೆ ಅವರ ಮಗ ರಫೀಕ್ (4) ಹಾಗೂ ಮಗಳು ಹರ್ಷಿಯಾ ಭಾನು (16) ಮನೆಯಲ್ಲಿದ್ದರು. ಈ ವೇಳೆ ಮನೆಯಿಂದ ಗ್ಯಾಸ್ ವಾಸನೆ ಬರುತ್ತಿದೆ ಎಂದು ಪಕ್ಕದ ಮನೆಯ ಹೇಮಾವತಿ (18) ಎಂಬಾಕೆ ಬಂದಿದ್ದಾಳೆ. ಈ ವೇಳೆ ತಕ್ಷಣ ಬೆಂಕಿ ಹೊತ್ತಿಕೊಂಡಿದ್ದು ಸ್ಫೋಟ (Cylinder Blast) ಸಂಭವಿಸಿದೆ.

ಘಟನೆಯಲ್ಲಿ ಮೂವರು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರಿಗೂ 35 ರಿಂದ 40% ಸುಟ್ಟ ಗಾಯಗಳಾಗಿದ್ದು ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ಮನೆಯಲ್ಲಿದ್ದ ಪಾತ್ರೆ ಹಾಗೂ ಸಾಮಾನುಗಳು ಎಲ್ಲವೂ ಚೆಲ್ಲಾಪಿಲ್ಲಿಯಾಗಿವೆ. ಮನೆಯ ಮೇಲಿನ ತಗಡಿನ ಶೀಟ್‍ಗಳು ಹಾರಿ ಹೋಗಿವೆ. ಹಿಂಬದಿಯ ಮನೆಯ ಎರಡು ಬೈಕ್‍ಗಳು ಹಾನಿಗೊಳಗಾಗಿವೆ.

ಈ ಬಗ್ಗೆ `ಪಬ್ಲಿಕ್ ಟಿವಿ’ ವರದಿಗಾರರಿಂದ ಮಾಹಿತಿ ಪಡೆದ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಆರ್ಥಿಕ ಸಹಾಯ ಮಾಡಿದ್ದು, ಸೂಕ್ತ ಚಿಕಿತ್ಸೆ ಕೊಡಿಸುವ ಭರವಸೆ ನೀಡಿ ಅವರ ಅಮ್ಮ ಅಂಬುಲೆನ್ಸ್ ಮೂಲಕ ಗಾಯಾಳು ಹೇಮಾವತಿಯನ್ನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ.

ಈ ಸಂಬಂಧ ಚಿಕ್ಕಬಳ್ಳಾಪುರ (Chikkaballapur) ನಗರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್‍ಐ ನಂಜುಂಡಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article