ಉಡುಪಿ: ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ಪೊಲೀಸ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್ ಕ್ಲಬ್ ಜಂಟಿಯಾಗಿ ಆಯೋಜಿಸಿರುವ ಎರಡು ತಿಂಗಳ ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಭಾನುವಾರ ನಗರದಲ್ಲಿ ಸೈಕಲ್ ಜಾಥಾ ಆಯೋಜಿಸಲಾಗಿತ್ತು.
ಎಸ್ ಪಿ ಲಕ್ಷ್ಮಣ ಬ ನಿಂಬರ್ಗಿ ನೇತೃತ್ವದಲ್ಲಿ ಸೈಕ್ಲಥಾನ್ ನಡೆದಿದ್ದು, ಉಡುಪಿ ನಗರ ಠಾಣೆ ಬಳಿಯಿಂದ ಸೈಕ್ಲಥಾನ್ ಗೆ ಚಾಲನೆ ನೀಡಲಾಯ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ ನಿಂಬರಗಿ ಹಾಗೂ ಬಡಗಬೆಟ್ಟು ಕೋ-ಅಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಹಾಗೂ ಸೊಸೈಟಿ ನಿರ್ದೇಶಕರುಗಳು ಜಂಟಿಯಾಗಿ ಹಸಿರು ನಿಶಾನೆ ತೋರಿಸುವುದರ ಮೂಲಕ ಆರಂಭ ನೀಡಿದರು.
ಉಡುಪಿಯ ಲಯನ್ಸ್ ಸರ್ಕಲ್, ಬಿಗ್ ಬಜಾರ್ ಅಜ್ಜರಕಾಡು, ಬ್ರಹ್ಮಗಿರಿ- ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ, ಕರಾವಳಿ ಬೈಪಾಸ್, ಸಂತೆಕಟ್ಟೆ ಮಾರ್ಗವಾಗಿ ಅಲ್ಲಿಂದ ತಿರುಗಿ ಸಂತೆಕಟ್ಟಿ, ಅಂಬಾಗಿಲು, ಕಲ್ಸಂಕ, ಕಡಿಯಾಳಿ, ಎಮ್ ಜಿ ಎಮ್ ಕಾಲೇಜು ಬಸ್ಟ್ಯಾಂಡ್, ಸಾಗಿ ಸಿಟಿ ಬಸ್ ಸ್ಟ್ಯಾಂಡ್, ಬನ್ನಂಜೆ, ಎಸ್ಪಿ ಕಚೇರಿ, ಬ್ರಹ್ಮಗಿರಿ, ಅಜ್ಜರಕಾಡಿ, ಡಯಾನಾ ಹೊಟೇಲ್, ಬಿಗ್ ಬಜಾರ್, ಲಯನ್ಸ್ ಸರ್ಕಲ್ ಮೂಲಕ ಬಡಗಬೆಟ್ಟಿ ಸೊಸೈಟಿ ಬಳಿ ಸಮಾಪನಗೊಂಡಿತು.
ಸೈಕ್ಲಥಾನ್ ನಂತರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ ನಿಂಬರಗಿ, ದೇಹವನ್ನು ದಂಡಿಸ್ತಾಯಿದ್ದರೆ ಮನುಷ್ಯನಿಗೆ ಯಾವುದೇ ಅನಾರೋಗ್ಯ ಆವರಿಸುವುದಿಲ್ಲ. ಸಮಾಜದಲ್ಲಿ ಜಾಗೃತಿ ಮೂಡಿಸುವ ಜೊತೆಗೆ ತಮ್ಮ ಶಾರೀರಿಕ ಸದೃಢತೆ ಕಾಪಾಡಲು ಸೈಕ್ಲಿಂಗ್ ನಿಂದ ಸಾಧ್ಯ. ಪರಿಸರ ಕಾಳಜಿಯೂ ಈ ಸೈಕ್ಲಿಂಗ್ ನಲ್ಲಿದ್ದು, ಇದು ಒಂದು ದಿನದ ಕಾರ್ಯಕ್ರಮವಾಗದೆ ನಮ್ಮ ಜೀವನದ ಉದ್ದಕ್ಕೂ ಸೈಕಲ್ ಉಪಯೋಗಿಸೋಣ. ಮಾದಕ ವ್ಯಸನ ಅಭಿಯಾನ ಮುಂದುವರಿಸೋಣ. ಎರಡು ತಿಂಗಳುಗಳ ಕಾಲ ನಡೆಯುವ ಮಾಸಾಚರಣೆಗೆ ಉಡುಪಿ ಜನರಿಂದ, ಸಂಘ ಸಂಸ್ಥೆಗಳಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಮಾಸಾಚರಣೆ ಫಲ ಕೊಡಬೇಕಂದ್ರೆ ವ್ಯಸನವಿದ್ದವರು ಅದನ್ನು ತ್ಯಜಿಸಬೇಕು. ವ್ಯಸನಕ್ಕೆ ಯಾರೂ ಒಳಗಾಗಬಾರದು ಎಂದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು ಮಾತನಾಡಿ ಮಾಧ್ಯಮದಲ್ಲಿ ಇದ್ದುಕೊಂಡು ನಾವು ನಮ್ಮ ಕೆಲಸದಲ್ಲಿ ಮಾತ್ರ ಭಾಗಿಯಾಗುತ್ತೇವೆ. ಆದ್ರೆ ಇಂತದ್ದೊಂದು ವಿಭಿನ್ನ ಅಭಿಯಾನದಲ್ಲಿ ಸಮಾಜಮುಖಿ ಕೆಲಸ ಮಾಡಲು ಮೊದಲ ಅವಕಾಶವಾಗಿದೆ. ಮನಸ್ಸಿಗೆ ಬಹಳ ನೆಮ್ಮದಿಯಿದೆ ಎಂದರು.
ಬಡಗಬೆಟ್ಟು ಕೋ-ಅಪರೇಟಿವ್ ಸೊಸೈಟಿ ಉಪಾಧ್ಯಕ್ಷ ಉಮಾನಾಥ್, ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಇಂದ್ರಾಳಿ ಜಯಕರ ಶೆಟ್ಟಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಡಿವೈಎಸ್ ಪಿ ಕುಮಾರಸ್ವಾಮಿ ಉಡುಪಿ ಪ್ರೆಸ್ ಕ್ಲಬ್ ಸಂಚಾಲಕ ನಾಗರಾಜ್ ರಾವ್ ಹಾಗೂ ಇತರರಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv