ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಡಾನಾ ಚಂಡಮಾರುತದಿಂದ (Cyclone Dana) ಆಂಧ್ರಪ್ರದೇಶ (Andhra Pradesh), ಒಡಿಶಾ (Odisha), ಪಶ್ಚಿಮ ಬಂಗಾಳ (West Bengal) ಮತ್ತು ತಮಿಳುನಾಡಿಗೆ (Tamil Nadu) ಅಪಾಯವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಚಂಡಮಾರುತವಾಗಿ ಬದಲಾಗಿರುವ ಡಾನಾ ಗುರುವಾರ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ರಾತ್ರಿ ವೇಳೆಗೆ ಒಡಿಶಾದ ಪುರಿ ಮತ್ತು ಬಂಗಾಳದ ಸಾಗರ ದ್ವೀಪದ ನಡ್ವೆ ತೀರ ದಾಟಬಹುದು ಎಂದು ಅಂದಾಜಿಸಲಾಗಿದೆ. ಒಂದೊಮ್ಮೆ ಚಂಡಮಾರುತ ಪಥ ಬದಲಿಸಿದರೆ ಬಾಂಗ್ಲಾ ದೇಶಕ್ಕೆ ಅಪಾಯ ಎದುರಾಗಬಹುದು ಎನ್ನಲಾಗಿದೆ.
ಒಡಿಶಾ, ಆಂಧ್ರ, ಬಂಗಾಳ ಮತ್ತು ತಮಿಳುನಾಡಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. 40ಕ್ಕೂ ಹೆಚ್ಚು ರೈಲುಗಳ ಸಂಚಾರ ರದ್ದು ಮಾಡಲಾಗಿದೆ. 200ಕ್ಕೂ ಹೆಚ್ಚು ರೈಲುಗಳ ಮಾರ್ಗ ಬದಲಿಸಲಾಗಿದೆ.
ಒಡಿಶಾದಲ್ಲಿ ಕೆಲವು ಪರೀಕ್ಷೆಗಳನ್ನು ಮುಂದೂಡಲಾಗಿದೆ. ತಮಿಳುನಾಡಿನಲ್ಲಿ ಈಶಾನ್ಯ ಮಾರುತಗಳು ಚುರುಕಾಗಿ ಚಲಿಸುತ್ತಿರುವುದರಿಂದ ಕರ್ನಾಟಕ ಸೇರಿ ವಿವಿಧೆಡೆ ಮಳೆಯಾಗುತ್ತಿದೆ.