– ಇನ್ನೂ 300 ಕಿ.ಮೀ ದೂರವಿರುವಾಗ್ಲೇ ಲಾಕ್
– ಪ್ರತಿದಿನ 180-220 ಕಿ.ಮೀ. ಪ್ರಯಾಣ
ಭುವನೇಶ್ವರ: ಲಾಕ್ಡೌನ್ ಆದ ಪರಿಣಾಮ ಅನೇಕ ಕಾರ್ಮಿಕರು ತಮ್ಮ ಸ್ವ-ಗ್ರಾಮಗಳಿಗೆ ನಡೆದುಕೊಂಡೇ ಹೋಗಿದ್ದಾರೆ. ಆದರೆ ಇಲ್ಲಿಬ್ಬರು ಸ್ನೇಹಿತರು ತಮ್ಮ ಗ್ರಾಮಕ್ಕೆ ತೆರಳು ಸೈಕಲ್ ಮೂಲಕ 1,200 ಕಿ.ಮೀ ದೂರ ಪ್ರಯಾಣ ಮಾಡಿದ್ದಾರೆ. ಆದರೆ ಅವರಿಗೆ ಅದೃಷ್ಟ ಕೈಕೊಟ್ಟಿದ್ದು, ಇದೀಗ ಅವರನ್ನು 14 ದಿನ ಐಸೋಲೇಷನ್ನಲ್ಲಿ ಇರಿಸಲಾಗಿದೆ.
ದೀಪ್ತಿರಾಜನ್ ಮತ್ತು ಗಣೇಶ್ವರ್ ಸೈಕಲಿನಲ್ಲಿ 1500 ಕಿಲೋ ಮೀಟರ್ ಪ್ರಯಾಣಿಸಲು ಮುಂದಾಗಿದ್ದರು. ಇಬ್ಬರು ಯುವಕರು ಪುದುಚೇರಿಯಿಂದ ತಮ್ಮ ಜಗತ್ಸಿಂಗ್ಪುರ ಜಿಲ್ಲೆಯ ಗ್ರಾಮಗಳಿಗೆ ತಲುಪಲು ಸೈಕಲ್ನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಆದರೆ ಇವರಿಬ್ಬರು ತಮ್ಮ ಗ್ರಾಮ ತಲುಪುವ ಮುನ್ನವೇ ವಿಶಾಖಪಟ್ಟಣಂನಲ್ಲಿ ಐಸೋಲೇಷನ್ ವಾರ್ಡಿನಲ್ಲಿ ಬಂಧಿಯಾಗಿದ್ದಾರೆ.
ದೀಪ್ತಿರಾಜನ್ ಮತ್ತು ಗಣೇಶ್ವರ್ ಇಬ್ಬರು ಸ್ನೇಹಿತರಾಗಿದ್ದು, ಪುದುಚೆರಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಲು ಫೆಬ್ರವರಿಯಲ್ಲಿ ಅಲ್ಲಿಗೆ ತೆರಳಿದ್ದರು. ಆದರೆ ಕೊರೊನಾದಿಂದ ಇಡೀ ದೇಶವೇ ಲಾಕ್ಡೌನ್ ಆಗಿದೆ. ಹೀಗಾಗಿ ಅವರು ತಮ್ಮ ಗ್ರಾಮಕ್ಕೆ ಹಿಂದಿರುಗಲು ಸಾಧ್ಯವಾಗದೆ ಪುದುಚೆರಿಯಲ್ಲಿ ಸಿಲುಕಿಕೊಂಡಿದ್ದರು. ಹೀಗಾಗಿ ಮನೆ ಬಾಡಿಗೆ ಪಾವತಿಸಲು ಹಣವಿಲ್ಲದ ಕಾರಣ ಇಬ್ಬರು ತಮ್ಮ ಗ್ರಾಮಗಳಿಗೆ ವಾಪಸ್ ಆಗಲು ನಿರ್ಧರಿಸಿದ್ದರು.
ಅದರಂತೆಯೇ ಇಬ್ಬರು ತಮ್ಮ ತಮ್ಮ ಸೈಕಲ್ನಲ್ಲಿ ಏಪ್ರಿಲ್ 12 ರಂದು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ತಮಿಳುನಾಡು, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಮೂಲಕ ಸಂಚರಿಸಿದ್ದ ಅವರನ್ನು ವಿಶಾಖಪಟ್ಟಣಂನಲ್ಲಿ ಐಸೋಲೇಷನ್ ವಾರ್ಡಿಗೆ ಒಳಪಡಿಸಲಾಗಿದೆ.
ಇಬ್ಬರು ಯುವಕರು ವಿಶಾಖಪಟ್ಟಣಂವರೆಗೆ ಸೈಕಲ್ಗಳಲ್ಲಿ 1,500 ಕಿ.ಮೀ ಪ್ರಯಾಣವನ್ನು ಕೈಗೊಂಡಿದ್ದರು. ಆದರೆ ವಿಶಾಖಪಟ್ಟಣಂನಲ್ಲಿ ಇಬ್ಬರು ಐಸೋಲೇಷನ್ ವಾರ್ಡಿಗೆ ಶಿಫ್ಟ್ ಆಗಿದ್ದಾರೆ. ಇಲ್ಲಿಯವರೆಗೂ ಅವರು 1,200 ಕಿ.ಮೀ. ಪ್ರಯಾಣ ಮಾಡಿದ್ದರು. ಪ್ರತಿದಿನ ಸುಮಾರು 12-14 ಗಂಟೆಗಳ ಕಾಲ ಸೈಕಲ್ ಮೂಲಕ 180-220 ಕಿ.ಮೀ. ಪ್ರಯಾಣ ಮಾಡುತ್ತಿದ್ದರು. ಇನ್ನೊಂದೆರಡು ದಿನಗಳು ಸೈಕಲ್ ನಲ್ಲಿ ಪ್ರಯಾಣಿಸಿದ್ದರೆ ಇಬ್ಬರೂ ಊರು ಸೇರಲು ಸಾಧ್ಯವಾಗುತ್ತಿತ್ತು.
ಈ ವೇಳೆ ಮಾತನಾಡಿದ ಗಣೇಶ್ವರ, ನಾನು ಮತ್ತು ದೀಪ್ತಿರಾಜನ್ ಐಸೋಲೇಷನ್ ವಾರ್ಡಿಗೆ ಶಿಫ್ಟ್ ಮಾಡದಿದ್ದರೆ 2-3 ದಿನಗಳಲ್ಲಿ ತಮ್ಮ ಗ್ರಾಮಗಳನ್ನು ತಲುಪುತ್ತಿದ್ದೆವು. ತಮ್ಮನ್ನು ಕಾಲೇಜಿನಲ್ಲಿ ಸ್ಥಾಪಿಸಲಾದ ಪ್ರತ್ಯೇಕ ಐಸೋಲೇಷನ್ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಹೇಳಿದರು. ಲಾಕ್ಡೌನ್ ವೇಳೆ ನಮಗೆ ಊಟವೂ ಸಿಗುತ್ತಿರಲ್ಲಿ. ಹೀಗಾಗಿ ಸೈಕಲ್ ಮೂಲಕ ಹೊರಟ್ಟಿದ್ದೆವು. ನಾವು ರಾತ್ರಿಯಲ್ಲಿ ಪೆಟ್ರೋಲ್ ಪಂಪ್ಗಳಲ್ಲಿ ಮಲಗುತ್ತಿದ್ದೆವು ಎಂದು ದೀಪ್ತಿರಾಜನ್ ಹೇಳಿದರು.