ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಅಧಿಕೃತ ನಿವಾಸವನ್ನು 40,000 ಚದರ ಗಜಗಳಷ್ಟು (8 ಎಕರೆ) ವಿಸ್ತೀರ್ಣದ ಐಷಾರಾಮಿ ಮಹಲಾಗಿ (Sheesh Mahal) ಪರಿವರ್ತಿಸಲು ಕಟ್ಟಡ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಜಾಗೃತ ಆಯೋಗ ವಿವರವಾದ ತನಿಖೆಗೆ ಆದೇಶಿಸಿದೆ.
2024 ರ ಅಕ್ಟೋಬರ್ 14 ರಂದು ಬಿಜೆಪಿ ನಾಯಕ ವಿಜೇಂದರ್ ಗುಪ್ತಾ ಸಲ್ಲಿಸಿದ ದೂರಿನ ಮೇರೆಗೆ ವಿವರವಾದ ತನಿಖೆ ನಡೆಸುವಂತೆ ಸಿವಿಸಿ ಕೇಂದ್ರ ಲೋಕೋಪಯೋಗಿ ಇಲಾಖೆಯನ್ನು ಕೇಳಿದೆ.
ರಾಜ್ಪುರ ರಸ್ತೆಯಲ್ಲಿರುವ ಪ್ಲಾಟ್ ಸಂಖ್ಯೆ 45 ಮತ್ತು 47 ಸೇರಿದಂತೆ ಸರ್ಕಾರಿ ಆಸ್ತಿಗಳನ್ನು ಹಿಂದೆ ಟೈಪ್-ವಿ ಫ್ಲಾಟ್ಗಳಾಗಿತ್ತು. ಇಲ್ಲಿ ಹಿರಿಯ ಅಧಿಕಾರಿಗಳು ಮತ್ತು ನ್ಯಾಯಾಧೀಶರನ್ನು ಇರಿಸಲಾಗಿತ್ತು. ಇವುಗಳ ಜೊತೆಗೆ ಫ್ಲಾಗ್ ಸ್ಟಾಫ್ ರಸ್ತೆಯಲ್ಲಿರುವ ಎರಡು ಬಂಗಲೆಗಳನ್ನು ಕೆಡವಿ ಹೊಸ ನಿವಾಸದಲ್ಲಿ ವಿಲೀನಗೊಳಿಸಲಾಗಿದೆ ಎಂದು ಬಿಜೆಪಿ ನಾಯಕ ವಿಜೇಂದರ್ ಗುಪ್ತಾ ದೂರಿನಲ್ಲಿ ಆರೋಪಿಸಿದ್ದರು.
ಅಲ್ಲದೇ ನಿರ್ಮಾಣವು ನೆಲದ ವ್ಯಾಪ್ತಿ ಮತ್ತು ನೆಲದ ವಿಸ್ತೀರ್ಣ ಅನುಪಾತ (ಎಫ್ಎಆರ್) ಮಾನದಂಡಗಳನ್ನು ಉಲ್ಲಂಘಿಸಿದೆ. ಸರಿಯಾದ ವಿನ್ಯಾಸ ಯೋಜನೆ ಅನುಮೋದನೆಗಳನ್ನು ಹೊಂದಿಲ್ಲ ಎಂದು ಗುಪ್ತಾ ಹೇಳಿದ್ದರು. ಕಳೆದ ವರ್ಷ ನವೆಂಬರ್ 14 ರಂದು ಅಗತ್ಯ ಕ್ರಮಕ್ಕಾಗಿ ದೂರನ್ನು ಔಪಚಾರಿಕವಾಗಿ ಕೇಂದ್ರ ಜಾಗೃತ ಆಯೋಗ CPWD ಗೆ ರವಾನಿಸಲಾಗಿತ್ತು.
ಡಿಸೆಂಬರ್ 24 ರಂದು ಆರಂಭಿಕ ವಿಚಾರಣೆಯ ನಂತರ CPWD ಕೇಂದ್ರ ಜಾಗೃತ ಆಯೋಗಕ್ಕೆ ವಾಸ್ತವಿಕ ವರದಿಯನ್ನು ಸಲ್ಲಿಸಿತ್ತು. ಇದರ ಬೆನ್ನಲ್ಲೇ ಫೆ.13 ರಂದು ವರದಿಯನ್ನು ಪರಿಶೀಲಿಸಿದ ನಂತರ ಕೇಂದ್ರ ಜಾಗೃತ ಆಯೋಗ ಮುಖ್ಯಮಂತ್ರಿಯವರ ನಿವಾಸದ ನವೀಕರಣ ಮತ್ತು ಐಷಾರಾಮಿ ಸೇರ್ಪಡೆಗಳ ವೆಚ್ಚದ ಬಗ್ಗೆ ವಿವರವಾದ ತನಿಖೆಗೆ ಆದೇಶಿಸಿದೆ.