ಹಾಸನ: ಬಟ್ಟೆ ಒಣಹಾಕುವಾಗ ವಿದ್ಯುತ್ ಶಾಕ್ ಹೊಡೆದ ಪರಿಣಾಮ ತಾಯಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ಹಾಸನದಲ್ಲಿ ನಡೆದಿದೆ.
ಚನ್ನರಾಯಪಟ್ಟಣ ತಾಲೂಕಿನ ಅಗಸರಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. ತಾಯಿ ಭಾಗ್ಯಮ್ಮ(49) ಮತ್ತು ಮಕ್ಕಳಾದ ದಾಕ್ಷಾಯಿಣಿ(30), ದಯಾನಂದ(34) ಮೃತ ದುರ್ದೈವಿಗಳು.
ಮನೆ ಬಳಿ ಇರುವ ವಿದ್ಯುತ್ ಕಂಬಕ್ಕೆ ಬಟ್ಟೆ ಒಣಹಾಕಲು ತಂತಿ ಕಟ್ಟಲಾಗಿತ್ತು. ಬೆಳ್ಳಂಬೆಳಗ್ಗೆ ಈ ತಂತಿಯ ಮೇಲೆ ಬಟ್ಟೆ ಒಣಹಾಕಲು ದಾಕ್ಷಾಯಿಣಿ ಹೋಗಿದ್ದರು. ಈ ವೇಳೆ ವಿದ್ಯುತ್ ಕಂಬದಿಂದ ತಂತಿಗೆ ಕರೆಂಟ್ ಹರಿದು, ದಾಕ್ಷಾಯಿಣಿಗೆ ಶಾಕ್ ಹೊಡೆದಿದೆ.
ಈ ವೇಳೆ ತಂಗಿ ಒದ್ದಾಡುತ್ತಿದ್ದುದನ್ನು ಕಂಡ ದಯಾನಂದ ಆಕೆಯನ್ನು ಹಿಡಿಯಲು ಹೋದಾಗ ಆತನಿಗೂ ಶಾಕ್ ಹೊಡೆದಿದೆ. ಬಳಿಕ ತಾಯಿ ಮಕ್ಕಳನ್ನು ಶಾಕ್ಯಿಂದ ತಪ್ಪಿಸಲು ಹೋಗಿ ಅವರಿಗೂ ವಿದ್ಯುತ್ ಶಾಕ್ ತಗುಲಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.