-ಅಧಿಕಾರಕ್ಕೆ ಬಂದು ಕ್ರಾಂತಿಕಾರಿಗಳ ಹೆಸರನ್ನು ಕಾಂಗ್ರೆಸ್ ಉಳಿಸಲಿಲ್ಲ
ಬೆಂಗಳೂರು: ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಇದೇನಾ ನಿಮ್ಮ ಕಾನೂನು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ (CT Ravi) ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಾಗಿರುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಇಬ್ಬರೂ ಕಾನೂನು ತನ್ನ ಕೆಲಸ ಮಾಡುತ್ತದೆ ಎಂದಿದ್ದಾರೆ. ಇವರ ಕಾನೂನು ಪಕ್ಷಪಾತದ ಕೆಲಸ ಮಾಡುತ್ತಿದೆ. ಖರ್ಗೆಯವರು ಆರ್ಎಸ್ಎಸ್ ಮತ್ತು ಬಿಜೆಪಿಯನ್ನು ಹುಚ್ಚು ನಾಯಿ ರೀತಿ ಹೊಡೆದು ಕೊಲ್ಲಬೇಕು ಎಂದರು. ಆಗ ದೂರು ಕ್ರಮ ಏನಾದರೂ ತೆಗೆದುಕೊಂಡರಾ? ಜಮೀರ್ ಹೇಳಿಕೆ ವಿರುದ್ಧ ನೋ ಆಕ್ಷನ್, ಗುರಪ್ಪ ನಾಯ್ಡು, ವಿನಯ್ ಕುಲಕರ್ಣಿ ವಿರುದ್ಧ ನೋ ಆಕ್ಷನ್. ಆದರೆ ಮುನಿರತ್ನ ವಿರುದ್ಧ ಕೂಡಲೇ ಕ್ರಮ ತೆಗೆದುಕೊಂಡಿದ್ದೀರಿ. ನಿಮ್ಮ ಕಾನೂನು ರಾಜ್ಯದಲ್ಲಿ ಪಕ್ಷಪಾತವಾಗಿದೆ. ಕೆಲವರ ಬಗ್ಗೆ ನಿಮ್ಮ ಕಾನೂನು ಜಾಣ ಕುರುಡಾಗಿದೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಇದೇನಾ ನಿಮ್ಮ ಕಾನೂನು? ನಾವು ಸ್ವಾಮೀಜಿ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ: ರಿಲೀಸ್ಗೂ ಮುನ್ನ ದಾಖಲೆ ಬರೆದ ‘ಪುಷ್ಪ 2’- ಕೆಲವೇ ಗಂಟೆಗಳಲ್ಲಿ 55 ಸಾವಿರ ಟಿಕೆಟ್ ಸೋಲ್ಡ್ ಔಟ್
ಸಿದ್ದರಾಮಯ್ಯ ಅವರು ಕಳೆದ ಜನವರಿ 26ರಂದು ಸಂವಿಧಾನ ದಿನ ಹಳೇ ಪ್ಲೇಟ್ ಪ್ಲೇ ಮಾಡಿದ್ದರು. ಬಿಜೆಪಿ, ಆರ್ಎಸ್ಎಸ್ನವರು ಯಾರು ಸ್ವಾತಂತ್ರ್ಯ ಹೋರಾಟಗಾರರು ಇರಲಿಲ್ಲ ಎಂದರು. ಸಿದ್ದರಾಮಯ್ಯಗೆ ಗೊತ್ತಿಲ್ಲ ಪಾಪ, ಹೆಡಗೇವಾರ್ ಅವರು ಸ್ವಾತಂತ್ರ್ಯ ಆಂದೋಲನದಲ್ಲಿ ಭಾಗವಹಿಸಿದ್ದರು. ಅವರ ಜೊತೆ ಸುಭಾಷ್ ಚಂದ್ರ ಬೋಸ್ ಸಹ ಚರ್ಚೆಗೆ ಬರುತ್ತಿದ್ದರು. ಇದರ ದಾಖಲೆ ಪಬ್ಲಿಕ್ ಡೊಮೈನ್ನಲ್ಲಿ ಈಗಲೂ ಇದೆ ಎಂದರು.
ಇನ್ನೂ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೊರಡಿಸಿದಾಗ ಸಿದ್ದರಾಮಯ್ಯಗೆ ಆಗ 27 ವರ್ಷ. ದೇಶದ ಉದ್ದಗಲಕ್ಕೂ ಹಲವಾರು ಜನ ತುರ್ತು ಪರಿಸ್ಥಿತಿ ವಿರೋಧಿಸಿ ಜೈಲಿಗೆ ಹೋದರು. ಆಗ ಸಿದ್ದರಾಮಯ್ಯ ವಕೀಲರಾಗಿದ್ದರು. ಯಾಕೆ ಹೋರಾಡಲಿಲ್ಲ. ಸಿದ್ದರಾಮಯ್ಯ ತಮ್ಮ ಅಜ್ಞಾನ ಪ್ರದರ್ಶನ ಬಿಡಲಿ. ಕ್ರಾಂತಿಕಾರಿಗಳು ಬ್ರಿಟಿಷರ ಎದೆ ನಡುಗಿಸಿದರು. ಕ್ರಾಂತಿಕಾರಿಗಳಲ್ಲಿ ಕಾಂಗ್ರೆಸ್ನವರು ಇರಲಿಲ್ಲ. ಆದರೆ ಪರಿಸ್ಥಿತಿ ಲಾಭ ಪಡೆದಿದ್ದು ಕಾಂಗ್ರೆಸ್, ಅಧಿಕಾರಕ್ಕೆ ಬಂದು ಕ್ರಾಂತಿಕಾರಿಗಳ ಹೆಸರೂ ಉಳಿಸಲಿಲ್ಲ ಎಂದು ಟೀಕಿಸಿದರು.
ಬಿಜೆಪಿ (BJP) ಭಿನ್ನಮತ ವಿಚಾರವಾಗಿ ಮಾತನಾಡಿದ ಅವರು, ಎಕ್ಸ್ (ಟ್ವಿಟರ್) ಇರುವುದೇ ನಮ್ಮ ಮನದ ಮಾತು ಹಂಚಿಕೊಳ್ಳಲು. ಹೀಗೆ ಸುಮ್ಮನೆ ಕೂತಾಗ ಏನೋ ಹೊಳೆಯಿತು ಹಂಚಿಕೊಂಡೆ ಅಷ್ಟೇ. ಅನಂತ್ಕುಮಾರ್ ಒಮ್ಮೆ ಹೇಳಿದ್ದನ್ನು ನಾನು ಎಕ್ಸ್ನಲ್ಲಿ ಹಾಕಿದ್ದೇನೆ. ಈಗ ನಿಮ್ಮ ಜೊತೆ ನಾನು ಏನೂ ಹಂಚಿಕೊಳ್ಳಲ್ಲ. ನಾನು ಯಾವ ವೇದಿಕೆಯಲ್ಲಿ ಮಾತಾಡಬೇಕು ಅಲ್ಲಿ ಮಾತನಾಡುತ್ತೇನೆ. ಕಾಲ ಎಲ್ಲವನ್ನೂ ಸರಿ ಮಾಡುತ್ತದೆ. ಅದಕ್ಕೆ ಆ ಶಕ್ತಿ ಇದೆ. ಪಕ್ಷದ ಆಂತರಿಕ ವಿಚಾರಗಳನ್ನು ನಾನು ಹೊರಗೆ ಮಾತನಾಡಲ್ಲ. ನಾನು ಯಾರಿಗೆ ಯಾವಾಗ ಏನು ಹೇಳಬೇಕು ಹೇಳುತ್ತೇನೆ ಎಂದು ಟಾಂಗ್ ಕೊಟ್ಟರು.ಇದನ್ನೂ ಓದಿ: ಸಂಬಂಧಗಳನ್ನೆಲ್ಲ ಸೂಟ್ಕೇಸ್ಗೆ ಹಾಕಿ ತುಂಬಿಡಿ: ಮಂಜು, ಗೌತಮಿಗೆ ಕಿಚ್ಚನ ವಾರ್ನಿಂಗ್