ರಾಮನಗರ: ಹೆಂಡತಿ- ತಾಯಿಯ ವ್ಯತ್ಯಾಸ ಗೊತ್ತಿಲ್ಲದವರು ಈ ರೀತಿ ಮಾಡ್ತಾರೆ. ಭಗವಾನ್ ಅವರು ಕೂಡಾ ಅದೇ ಸಾಲಿಗೆ ಸೇರಿದವರು ಎಂದು ಗೋಮಾಂಸ ಸೇವನೆ ವಿಚಾರವಾಗಿ ಶಾಸಕ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮನಗರದ ಮಾಗಡಿಯಲ್ಲಿ ಇಂದು ಮಾತನಾಡಿದ ಸಿ.ಟಿ ರವಿ, ಅವರಿಗೆ ದೇಶದ ಸಂಸ್ಕೃತಿ, ಗಾಂಧಿ ಅಂಬೇಡ್ಕರ್ ಅವರ ಆದರ್ಶಗಳು ತಿಳಿದಿಲ್ಲ. ಸಂವಿಧಾನದ ನಿರ್ದೇಶಕ ತತ್ವ, ಮೂಲ ಆಶಯದಲ್ಲಿ ನಡೆದಿರುವ ಚರ್ಚೆ, ಮೂಲ ಸಂಸ್ಕೃತಿ, ನಾಗರೀಕತೆ ಬೆಳೆದು ಬಂದ ಹಾದಿ ಗಮನಿಸಿದ್ರೆ ಹೀಗೆ ಮಾಡುತ್ತಿರಲಿಲ್ಲ ಅಂದ್ರು.
ಉಡುಪಿಯ ಕೃಷ್ಣಮಠದಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟ ಆಯೋಜನೆ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದೇವನೊಬ್ಬ ನಾಮ ಹಲವು ಎಂಬುದು ಹಿಂದುಗಳ ನಂಬಿಕೆ. ಯಾರು ಹೇಗೆ, ಯಾವ ರೂಪದಲ್ಲಿ ಬೇಕಾದ್ರೂ ಭಗವಂತನ ಪೂಜೆ ಮಾಡಿದ್ರೆ ಸಮರ್ಪಣೆ ಆಗುತ್ತೆ. ಉಳಿದವರು ಜಗತ್ತಿನಲ್ಲಿ ಈ ಆಧಾರದಲ್ಲಿ ಆಲೋಚಿಸಿದ್ರೆ ಬಹುಶಃ ಬಾಂಬ್ ಸ್ಫೋಟಗಳಾಗುತ್ತಿರಲಿಲ್ಲ. ಮತೀಯ ಗಲಭೆಗಳಿಗೆ ಅವಕಾಶಗಳಿರುತ್ತಿರಲಿಲ್ಲ. ಮಹಾತ್ಮ ಗಾಂಧಿಯವರು ರಘುಪತಿ ರಾಘವ ರಾಜಾ ರಾಮ್ ತತ್ವ ಹೇಳಿದ್ದಾರೆ. ಅದನ್ನ ಹಿಂದು-ಮುಸ್ಲಿಂ ಎಲ್ಲರೂ ಹೇಳಿದ್ರೆ ಸಂಘರ್ಷ ಇರ್ತಿರಲಿಲ್ಲ. ಯಾವ ಮಸೀದಿಯಲ್ಲಿಯೂ ಈಶ್ವರ-ಅಲ್ಲಾ ನಾಮ್ ಎಂದು ಹೇಳಿದ್ದನ್ನ ಕೇಳಿಲ್ಲ. ಇದು ಹಿಂದುಗಳಿಗೆ ಮಾತ್ರ ಸೀಮಿತವಾಗಬಾರದು ಅಂದ್ರು.
ಕಲ್ಲಡ್ಕ ಪ್ರಭಾಕರ್ ಗೆ ಇಫ್ತಾರ್ ಆಯೋಜನೆ ಮಾಡಲು ಖಾದರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಕಲ್ಲಡ್ಕರ ಜೀವನ, ಬೆಳೆದ ಪದ್ಧತಿಯೇ ಬೇರೆ, ಖಾದರ್ ಅವರ ಪದ್ಧತಿಯೇ ಬೇರೆ. ಮಸೀದಿಗಳಲ್ಲಿ ದೀಪಾವಳಿ, ಗಣಪತಿ ಉತ್ಸವ ನಡೆಸಿದ್ರೆ ಸ್ವಾಭಾವಿಕ ಸೌಹಾರ್ದತೆ ಬೆಳೆಯುತ್ತೆ. ಹಿಂದು ದೇವಾಲಯಗಳಲ್ಲಿ ಈದ್ ಆಚರಿಸಿದ್ರೆ ಸೌಹಾರ್ದಯುತ ಸಂಕೇತವಾಗುತ್ತೆ ಅಂದ್ರು.
ಇಂದು ಮೈಸೂರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಮನೆಯಂಗಳ ಸಭಾಂಗಣದಲ್ಲಿ ವಿಚಾರವಾದಿ ಕೆ.ಎಸ್. ಭಗವಾನ್, ಮೈಸೂರು ವಿ.ವಿ. ಪ್ರೊ. ಮಹೇಶಚಂದ್ರ ಗುರು, ಕಾಂಗ್ರೆಸ್ ಮಾಜಿ ಮೇಯರ್ ಪುರುಷೋತ್ತಮ್ ಸೇರಿದಂತೆ ಹಲವು ಗಣ್ಯರು ಗೋಮಾಂಸ ಸೇವಿಸಿ ಬಳಿಕ ವಿಚಾರ ಸಂಕಿರಣ ಉದ್ಘಾಟನೆ ಮಾಡಿದರು. ಅಲ್ಲದೇ ಕಾರ್ಯಕ್ರಮಕ್ಕೆ ಬಂದಿದ್ದ ಸಭಿಕರಿಗೂ ಗೋ ಮಾಂಸ ವಿತರಣೆ ಮಾಡಲಾಯ್ತು.