ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಸದನದ ಅಂತರಿಕ ಬಹುಮತ ಮಾತ್ರವಿದೆ, ಆದರೆ ಜನರ ಬಹುಮತವಿಲ್ಲ ಎಂದು ಸಿಟಿ ರವಿ ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರ ವಿಶ್ವಾಸ ಮತ ವೇಳೆ ಸದನ ಬಹಿಷ್ಕಾರ ನಡೆಸಿದ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬುವುದು ಜನರ ಉದ್ದೇಶ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಅಧಿಕಾರಕ್ಕಾಗಿ ಮೈತ್ರಿ ಸರ್ಕಾರ ರಚಿಸಿದ್ದಾರೆ. ಇದು ಹೆಚ್ಚಿನ ದಿನ ನಡೆಯಲ್ಲ. ಮೈತ್ರಿ ಸರ್ಕಾರದ ಸಾಂದರ್ಭಿಕ ಶಿಶುವಷ್ಟೇ. ಸಾಲ ಮನ್ನಾ ಮಾಡದಿದ್ದರೆ ಜನರ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವುದಾಗಿ ಹೇಳಿದ್ದಾರೆ. ನಾವು ಬಂದ್ ಮಾಡುತ್ತಿಲ್ಲ ಜನರ ಬಂದ್ಗೆ ಬಿಜೆಪಿ ಪಕ್ಷದ ಬೆಂಬಲ ಇದೆ ಎಂದರು.
ಇದೇ ವೇಳೆ ಮಾತನಾಡಿದ ಬಿಜೆಪಿ ನಾಯಕರದ ಆರ್ ಅಶೋಕ್ ಅವರು, ಜೆಡಿಎಸ್ ಸರ್ಕಾರವನ್ನು ಜನರು ತಿರಸ್ಕರಿಸಿದ್ದಾರೆ. ಆದರೆ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಈ ಅಪವಿತ್ರ ಮೈತ್ರಿ ವಿರುದ್ಧ ನಾವು ಸದನ ಬಹಿಷ್ಕಾರ ಮಾಡಿದ್ದೇವೆ ಎಂದು ಹೇಳಿದರು.
ಇದಕ್ಕೂ ಮುನ್ನ ಇಂದು ಬೆಳಗ್ಗೆ 11.30 ಸುಮಾರಿಗೆ ಆರಂಭವಾದ ಕಲಾಪದಲ್ಲಿ ಮೊದಲು ಸ್ಪೀಕರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್ ಅವರು ಸ್ಪೀಕರ್ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆದ ಕಾರಣ ರಮೇಶ್ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ನಂತರ ಆರಂಭವಾದ ಕಲಾಪದಲ್ಲಿ ಸಿಎಂ, ಡಿಸಿಎಂ ಸೇರಿದಂತೆ ಎಲ್ಲರೂ ರಮೇಶ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಮುಖ್ಯಮಂತ್ರಿಯವರು ಕಲಾಪದಲ್ಲಿ ಮಾತನಾಡಿದ ಬಳಿಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾತನಾಡಿ ವಾಗ್ದಾಳಿ ನಡೆಸಿದರು. ಇಬ್ಬರು ನಾಯಕರ ಮಾತಿನ ವೇಳೆ ಪರಸ್ಪರ ಆರೋಪಗಳ ಸುರಿಮಳೆಯೂ ನಡೆಯಿತು. ಭಾಷಣದಲ್ಲಿ ಬಿಎಸ್ವೈ ಇಂದು ಸಂಜೆ ಒಳಗಡೆ ಸಾಲಮನ್ನಾ ಮಾಡದೇ ಇದ್ದರೆ ಸೋಮವಾರ ಕರ್ನಾಟಕ ಬಂದ್ ಮಾಡಲಾಗುವುದು ಎಂದು ಹೇಳಿ ಸಭಾತ್ಯಾಗ ಮಾಡಿದರು. ಬಿಎಸ್ವೈ ಸಭಾತ್ಯಾಗ ಮಾಡುತ್ತಿದ್ದಂತೆ ಬಿಜೆಪಿ ಶಾಸಕರು ಅವರನ್ನು ಹಿಂಬಾಲಿಸಿದರು. ವಿರೋಧ ಪಕ್ಷದ ಅನುಪಸ್ಥಿತಿಯಲ್ಲಿ ನಡೆದ ಧ್ವನಿ ಮತದಲ್ಲಿ ಕುಮಾರಸ್ವಾಮಿಯವರು ಬಹುಮತ ಗಳಿಸಿದರು. ಈ ಮೂಲಕ ರಾಜ್ಯದಲ್ಲಿ ಅಧಿಕೃತವಾಗಿ ಜೆಡಿಎಸ್- ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದಿತು.