ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನವರಿಗೆ ಥ್ರೆಟ್ ಇಲ್ಲದಿರಬಹುದು. ಆದರೆ ಕೊತ್ವಾಲ್ ರಾಮಚಂದ್ರನ ಕೆಲ ಶಿಷ್ಯರು ರಾಜಕಾರಣದಲ್ಲಿ ಇರುವುದರಿಂದ ಅವರಿಂದ ಯಾರಿಗೂ ತೊಂದರೆ ಆಗಬಾರದೆಂದು ಹೆಚ್ಚಿನ ಭದ್ರತೆ ಒದಗಿಸಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ (CT Ravi) ಕುಟುಕಿದ್ದಾರೆ.
ಚಿಕ್ಕಮಗಳೂರಿನ ಬಸವನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D K Shivakumar) ಅವರಿಗೂ ಪರೋಕ್ಷವಾಗಿ ಬಿಜೆಪಿ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ. ಅವರು ಬಂದರೆ ಬೇಡ ಎನ್ನಲು ನಾವೇನು ಸನ್ಯಾಸಿಗಳಾ ಎಂದಿದ್ದಾರೆ. ದೊಡ್ಡ ಲೀಡರ್ಗಳು, ಮಾಜಿ ಸಿಎಂ, ವಿಪಕ್ಷ ನಾಯಕರು ಕಾಂಗ್ರೆಸ್ ಬಿಟ್ಟು ಬಿಜೆಪಿ (BJP) ಗೆ ಬರುತ್ತೇವೆ ಅಂದರೆ ಬನ್ನಿ ಎಂದು ಹೇಳುತ್ತೇವೆ. ಬೇಡ ಅನ್ನಲು ನಾವೇನು ಸನ್ಯಾಸಿಗಳಾ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿಯನ್ನು ಬಿಜೆಪಿಗೆ ಆಹ್ವಾನಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಒಬ್ರೇ ನಾಯಕರಲ್ಲ- ಡಿಕೆಶಿ ನೇರಾನೇರ ಟಾಂಗ್
ರಾಜಕೀಯದಲ್ಲಿ ಭವಿಷ್ಯ ಅಥವಾ ಆತ್ಮತೃಪ್ತಿ ಎರಡಲ್ಲಿ ಒಂದಾದರೂ ಇರಬೇಕು. ಆದರೆ ಈಗ ಕಾಂಗ್ರೆಸ್ನಲ್ಲಿ ಆತ್ಮತೃಪ್ತಿಯೂ ಇಲ್ಲ, ಅಧಿಕಾರವೂ ಇಲ್ಲ. ಎರಡೂ ಇಲ್ಲವೆಂದ ಮೇಲೆ ಅಂತಹ ಪಕ್ಷದಲ್ಲಿ ಯಾರು ಇರುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು. ಒಂದು ಪಕ್ಷಕ್ಕೆ ಅಜೆಂಡಾ ಇರಬೇಕು, ನೀತಿ-ನೇತೃತ್ವ-ನಿಯತ್ತು ಈ ಮೂರು ಇರಬೇಕು. ಮೂರೂ ಇಲ್ಲ ಅಂದರೆ ಅಲ್ಲಿ ಯಾರು ತಾನೆ ಉಳಿಯುತ್ತಾರೆ ಎಂದು ಕುಟುಕಿದ್ದಾರೆ. ಹೆತ್ತವರಿಗೆ ಹೆಗ್ಗಣವೂ ಮುದ್ದು. ಆದರೆ ಎಲ್ಲರಿಗೂ ಅಲ್ಲ. ಇಂದಿನ ಕಾಂಗ್ರೆಸ್ (Congress) ಸ್ಥಿತಿಯೂ ಕೂಡ ಹಾಗೆ ಆಗಿದೆ ಎಂದರು.
ಅವರ ಪಕ್ಷದ ಸರ್ವೋಚ್ಛ ನಾಯಕರಿಗೆ ಏನೆಂದು ಕರೆಯುತ್ತಾರೆ ಎಂದು ಅವರಿಗೇ ಗೊತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಏನೆಂದು ಕರೆಯುತ್ತಾರೆಂದು ಪಾದಯಾತ್ರೆ ಮಾಡುವವರನ್ನ ಒಮ್ಮೆ ಕೇಳಿ. ಬೇಕಿದ್ದರೆ ಅದಕ್ಕೂ ಒಂದು ಸ್ಟ್ರೈಕ್ ಮಾಡಬಹುದು ಎಂದು ಕಾಂಗ್ರೆಸ್ ಪಕ್ಷದ ನಾಯಕರ ಕಾಲೆಳೆದಿದ್ದಾರೆ. ಇನ್ನು ಭಾರತ್ ಜೋಡೋ (Bharat Jodo), ಅವರ ಪಕ್ಷದ ಆಂತರಿಕ ವಿಷಯ. ಅದಕ್ಕೆ ನಾನು ತಲೆ ಹಾಕಲ್ಲ. ಹಿರಿಯರು, ಬಹುತೇಕ ಶಾಸಕರು ಭಾರತ್ ಜೋಡೋ ಯಾತ್ರೆಯಲ್ಲಿದ್ದಾರೆ. ಹಾಗಾಗಿ ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದರು. ಇದನ್ನೂ ಓದಿ: 8 ಚೀತಾಗಳು ಬಂದವು , ಆದ್ರೆ 16 ಕೋಟಿ ಉದ್ಯೋಗ ಬರಲಿಲ್ಲ – ರಾಹುಲ್ ಗಾಂಧಿ ಟೀಕೆ
ಗೋವಾದಲ್ಲಿ 11 ಮಂದಿ ಕಾಂಗ್ರೆಸ್ ಶಾಸಕರಲ್ಲಿ 9 ಜನ ಬಿಜೆಪಿ ಪಕ್ಷಕ್ಕೆ ಬಂದರು. ನಾವು ಯಾರಿಗೂ ಡಿಮ್ಯಾಂಡ್ ಮಾಡಿ ಬನ್ನಿ ಎಂದು ಕರೆದಿಲ್ಲ. ನಾವೇ ಬಂದು ಸೇರುತ್ತೇವೆ ಎಂದಾಗ ಬೇಡ ಅನ್ನೋಕೆ ನಾವ್ಯಾರು ಸನ್ಯಾಸಿಯಾ ಎಂದಿದ್ದಾರೆ. ಕಾಂಗ್ರೆಸ್ ಅನ್ಯಾಯ ಮಾಡಿದೆ ನಂಬಿ ಕೆಟ್ವಿ ಅಂತ ಬಿಜೆಪಿ ಸೇರುತ್ತೇವೆ ಎಂದರೆ ಆ ಸಾಲಿನಲ್ಲಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರನ್ನೂ ಬನ್ನಿ ಎನ್ನುತ್ತೇವೆ ಎಂದು ಪರೋಕ್ಷವಾಗಿ ಬಜೆಪಿಗೆ ಆಹ್ವಾನ ನೀಡಿದ್ದಾರೆ.