ಬೆಂಗಳೂರು: ಯೋಗ ಮತ್ತು ಯೋಗ್ಯತೆ ಇದ್ದವರಿಗೆ ಸಚಿವ ಸ್ಥಾನ ಸಿಕ್ಕಿದೆ. ಸಚಿವ ಸ್ಥಾನ ಸಿಕ್ಕಿಲ್ಲ ಅನ್ನೋರು ಬೇಸರ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ನಿರಾಸೆ ನನಗೆ ಅರ್ಥವಾಗುತ್ತದೆ. ಎಲ್ಲರೂ ಸಮಾಧಾನದಿಂದ ಇದ್ದರೆ ಮುಂದೊಂದು ದಿನ ಬಡ್ಡಿ ಸಮೇತ ಬರುತ್ತದೆ ಎಂದು ಸಿ.ಟಿ ರವಿ ಹೇಳಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಿ.ಟಿ.ರವಿ, ಮೊದಲಿಗೆ ನನಗೆ ತುಂಬಾ ಖುಷಿಯಾಗಿದೆ. ಬಿಎಸ್ವೈ ಅವರು ಪರಿಶ್ರಮದಿಂದ ಪಕ್ಷ ಕಟ್ಟಿ, ತಮ್ಮದೇ ಆದ ಸ್ವಂತಿಕೆ ಮೇಲೆ ಪಕ್ಷವನ್ನು ಬೆಳೆಸಲು ಮುಂಚೂಣಿ ಸ್ಥಾನದಲ್ಲಿ ನಿಂತವರು. ಅವರ ಸಚಿವ ಸಂಪುಟದಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿಲ್ಲ ಎಂಬ ಕೊರಗು ಇತ್ತು. ಆದರೆ ಈಗ ಆ ಅವಕಾಶವನ್ನು ಬಿಎಸ್ವೈ ಅವರು ಪೂರೈಸಿದ್ದಾರೆ ಎಂದು ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಏನನ್ನು ಗುರುತಿಸಿ ಸಚಿವ ಸ್ಥಾನ ಕೊಟ್ಟಿದ್ದಾರೆ ಗೊತ್ತಿಲ್ಲ. ಆದರೆ ಯೋಗ್ಯರನ್ನು ಬೆಳೆಸುವ ಕೆಲಸವನ್ನು ಪಕ್ಷ ನಿರಂತರವಾಗಿ ಮಾಡುತ್ತಾ ಬಂದಿದೆ. ಅವರು ನಿರೀಕ್ಷೆ ಇಟ್ಟಿರುವ ಯೋಗ್ಯತೆಯನ್ನು ಉಳಿಸಿಕೊಳ್ಳುತ್ತೇನೆ. ಎಲ್ಲರಿಗೂ ಯೋಗ್ಯತೆ ಇತ್ತು, ಆದರೆ ಅವರಿಗೆ ಯೋಗನೂ ಕೂಡಿಬರಬೇಕು. ಎಲ್ಲರೂ ಸಮಾಧಾನದಿಂದ ಇದ್ದರೆ ಮುಂದೊಂದು ದಿನ ಬಡ್ಡಿ ಸಮೇತ ಬರುತ್ತದೆ. ನಾನು 2006 ಮತ್ತು 2008ರಲ್ಲಿ ನಮ್ಮ ಸರ್ಕಾರ ಬಂದಾಗ ನಾನು ಮಂತ್ರಿಯಾಗಬೇಕು ಎಂದು ತುಂಬಾ ಆಸೆ ಇಟ್ಟುಕೊಂಡಿದ್ದೆ. ಆದರೆ ಅದು ಸಾಧ್ಯವಾಗಿಲ್ಲ. ನನಗೆ 2012ರಲ್ಲಿ ಮಂತ್ರಿ ಸ್ಥಾನ ಸಿಕ್ಕಿತ್ತು. ಆದ್ದರಿಂದ ನಿಮ್ಮ ಯೋಗ್ಯತೆಗೆ ಕಾಲ ಕೂಡಿಬಂದಾಗ ಬಡ್ಡಿ ಸಮೇತ ಬರುತ್ತದೆ ಎಂದು ಉಳಿದವರ ಬಳಿ ಮನವಿ ಮಾಡಿಕೊಂಡರು.
ಯೋಗ ಮತ್ತು ಯೋಗ್ಯತೆ ಇದ್ದವರಿಗೆ ಸಚಿವ ಸ್ಥಾನ ಸಿಕ್ಕಿದೆ. ಸಚಿವ ಸ್ಥಾನ ಸಿಕ್ಕಿಲ್ಲ ಅನ್ನೋರು ಬೇಸರ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ, ರಾಜ್ಯದ ಹಾಗೂ ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡೋಣ. ನಿಮ್ಮ ನಿರಾಸೆ ನನಗೆ ಅರ್ಥವಾಗುತ್ತದೆ. ನನಗೆ ಯಾವುದೇ ಖಾತೆ ಸಿಕ್ಕಿದರು ಸಮರ್ಥವಾಗಿ ಕೆಲಸ ಮಾಡುತ್ತೇನೆ. ಯಡಿಯೂರಪ್ಪ ಅವರ ಕೈ ಕೆಳಗೆ ದುಡಿಯುವ ಎತ್ತಿನಂತೆ ಕೆಲಸ ಮಾಡುತ್ತೇನೆ ಎಂದು ಸಿಟಿ ರವಿ ಅವರು ತಿಳಿಸಿದರು.
ನಾನು ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ, ಆದರೆ ನನ್ನನ್ನು ಗುರುತಿಸಿ ಹತ್ತಾರು ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಪಕ್ಷಕ್ಕೂ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಜೊತೆಗೆ ಅವರು ಏನೇನು ನಿರೀಕ್ಷೆ ಇಟ್ಟಿದ್ದಾರೋ ಅದನ್ನು ಉಳಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತೇನೆ. ಸಾಮಾನ್ಯ ಬಡ ಕುಟುಂಬದಿಂದ ಬಂದವನು, ಇದೆಲ್ಲವನ್ನು ನನ್ನ ಪಕ್ಷ ಮತ್ತು ಕ್ಷೇತ್ರದ ಜನರು ಕೊಟ್ಟಿದ್ದಾರೆ ಎಂದರು.