ಚಿಕ್ಕಮಗಳೂರು: ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು, ಸತ್ಯ ಮತ್ತು ಸಿದ್ದರಾಮಯ್ಯ ಎಣ್ಣೆ ಸಿಗೇಕಾಯಿ ಇದ್ದಂತೆ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ರಾಜ್ಯದಲ್ಲಿ ಪ್ರವಾಹ ಬಂದಾಗ ಬರಲಿಲ್ಲ. ಕೊರೊನಾ ಸಂದರ್ಭದಲ್ಲಿ ಆಕ್ಸಿಜನ್ ಕೊಡಲಿಲ್ಲ. ಈಗ ಯೋಗ ಮಾಡಲು ಬಂದಿದ್ದಾರೆ ಎಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆರೋಪಕ್ಕೆ ಸಿ.ಟಿ.ರವಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ಅಂತವರನ್ನು ಬಿಟ್ಟರೆ ಬೇರೆ ಯಾರಿಲ್ಲ. ಸುಳ್ಳಿಗೆ ಏನಾದರೂ ಪ್ರಶಸ್ತಿ ನೀಡುವುದಾದರೆ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಬೇರೆ ಯಾರಿಗೂ ಸಿಗುವುದಿಲ್ಲ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿದ್ದರು. ಆಗ ಅವರು ಆಕ್ಸಿಜನ್ ಪ್ಲಾಂಟ್ ಹಾಕಿದ್ದರಾ ಎಂದು ಪ್ರಶ್ನಿಸಿದ್ದಾರೆ. ದೇಶದ ಪ್ರತಿ ಆಸ್ಪತ್ರೆಗೂ ಆಕ್ಸಿಜನ್ ಪ್ಲಾಂಟ್ ಹಾಕಿದ್ದು ಪಿಎಂ ಕೇರ್ನಲ್ಲಿ. ಆಗ ತುರ್ತಾಗಿ ತ್ವರಿತ ನಿರ್ಧಾರ ಕೈಗೊಂಡರು. ಇಲ್ಲವಾದರೆ ಸಾವಿನ ಪ್ರಮಾಣ ಇನ್ನು 10 ಪಟ್ಟು ಹೆಚ್ಚಾಗುತ್ತಿತ್ತು ಎಂದು ಮಾತಿನಲ್ಲಿ ತಿವಿದರು. ಇದನ್ನೂ ಓದಿ: ಪೆನ್ಷನ್ ಹಣ ಉಳಿಸಲು ಹೊಸ ಪ್ರಾಜೆಕ್ಟ್ ಮಾಡಲಾಗಿದೆ: ಅಗ್ನಿಪಥ್ ಬಗ್ಗೆ ಆರಗ ಪ್ರತಿಕ್ರಿಯೆ
ಒಂಬತ್ತು ತಿಂಗಳಲ್ಲಿ ಎಲ್ಲರಿಗೂ ಎರಡು ಡೋಸ್ ವ್ಯಾಕ್ಸಿನ್ ಹಾಕಿದ್ದಾರೆ. ಸಿದ್ದು ಹಾಕಿಸಿಕೊಂಡಿಲ್ವಾ. ಯಾರು ಹಾಕಿದ್ದು. ನಮ್ಮ ಸರ್ಕಾರ ಹಾಕಿದ್ದು. ಆ ಡೋಸೇಜ್ ಇರದಿದ್ದರೆ, ಸಿದ್ದರಾಮಯ್ಯನವರಿಗೆ ಎರಡು ಡೋಸ್ ಸಿಗದಿದ್ದರೆ ಏನಾಗುತ್ತಿತ್ತು ಎಂದು ನಾನು ಹೇಳುವುದಿಲ್ಲ. ಅವರೇ ಊಹೆ ಮಾಡಿಕೊಳ್ಳಲಿ ಎಂದು ಹರಿಹಾಯ್ದರು.
ಇದೇ ವೇಳೆ, ಮೋದಿ ರಾಜ್ಯ ಪ್ರವಾಸದ ಉದ್ದೇಶ ಮುಂಬರುವ ಚುನಾವಣಾ ಪೂರ್ವ ತಯಾರಿಯಾ ಎಂಬ ಪ್ರಶ್ನೆಗೆ ನಮ್ಮ ದೇಶದಲ್ಲಿ ಒಂದಲ್ಲ ಒಂದು ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುತ್ತದೆ. ನಾವು ಚುನಾವಣೆಗಾಗಿ ಕೆಲಸ ಮಾಡುವ ಸರ್ಕಾರ, ಪಕ್ಷ ನಮ್ಮದಲ್ಲ ಎಂದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಶಾಸಕರುಗಳೇ ಹತಾಶರಾಗಿ ಸರ್ಕಾರ ತೊಲಗಿ ಎಂದು ಬಯಸಿದ್ದಾರೆ: ಸಿ.ಟಿ ರವಿ
ಭಾರತ ವಿಶ್ವಗುರು ಆಗಬೇಕು. ಆತ್ಮನಿರ್ಭರವಾಗಿಬೇಕು. ಎಲ್ಲರೂ ಸ್ವಾವಲಂಬಿಯಾಗಿ ಸ್ವಂತಕಾಲ ಮೇಲೆ ನಿಲ್ಲುವಂತಹ ಬದುಕು ಕಟ್ಟಿಕೊಳ್ಳಬೇಕೆಂಬ ವ್ಯವಸ್ಥೆ ನಿರ್ಮಾಣವಾಗಬೇಕೆಂಬುದು ನಮ್ಮ ಮೂಲ ಆಶಯ, ಉದ್ದೇಶವಾಗಿದೆ. ಈ ಹಿನ್ನೆಲೆ ಪ್ರಧಾನಿಗಳು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ಅವರು ಬರುವಾಗ ಬರೀಗೈಲಿ ಬಂದಿಲ್ಲ. ಸುಮಾರು 30 ಸಾವಿರ ಕೋಟಿಯ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಚುನಾವಣೆಗಾಗಿ ಕೆಲಸ ಮಾಡಿಲ್ಲ. ಎಲೆಕ್ಷನ್ ಬರುತ್ತಿರುತ್ತೆ. ಹೋಗುತ್ತೆ. ಕೆಲವೊಮ್ಮೆ ಸೋಲಬಹುದು. ಕೆಲವೊಮ್ಮೆ ಗೆಲ್ಲಬಹುದು. ಚುನಾವಣೆಗಾಗಿಯೇ ಕೆಲಸ ಮಾಡುವವರು ಬೇರೆ. ನಾವು ದೇಶದ ಹಿತದೃಷ್ಟಿಯಿಂದ ಕೆಲಸ ಮಾಡುವವರು ಎಂದರು. ಗೆಲುವು ಅಧಿಕಾರದ ಅಂತಿಮ ಗುರಿಯಲ್ಲ. ಅದು ಗುರಿಯ ಸಾಧನೆಗೆ ಇರುವಂತಹಾ ಸಾಧನ ಎಂದು ಭಾವಿಸಿದ್ದೇವೆ ಎಂದು ಹೇಳಿದರು.