ಚಿಕ್ಕಮಗಳೂರು: ನಕ್ಸಲರಿಗಿಂತ ಸಿ.ಟಿ ರವಿ (CT Ravi) ಯೇ ಡೇಂಜರ್ ಎಂದು ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ವಾಗ್ದಾಳಿ ನಡೆಸಿದ್ದಾರೆ.
ಸಿ.ಟಿ ರವಿಯ ಅರ್ಬನ್ ನಕ್ಸಲ್ ಹೇಳಿಕೆಗೆ ಭೋಜೇಗೌಡ (Bhoje Gowda) ಪ್ರತಿಕ್ರಿಯೆ ನೀಡಿದ ಅವರು, ಸಂವಿಧಾನ ಬದಲಾವಣೆ, ರಾಷ್ಟ್ರಧ್ವಜ ಇಳಿಸಿ ಭಗವಧ್ವಜ, ಹಿಂದೂ ರಾಷ್ಟ್ರದ ಹೇಳಿಕೆಗಳು ನಕ್ಸಲರಿಗಿಂತ ಡೇಂಜರಸ್ ಪದಗಳು. ಒಂದು ಜಾತಿ, ಒಂದು ಧರ್ಮ ಇಟ್ಟುಕೊಂಡು ದೇಶವನ್ನು ರಕ್ಷಣೆ ಮಾಡೋಕಾಗುತ್ತಾ?. ಸಿ.ಟಿ ರವಿ ನಾಲಿಗೆ ಹರಿಬಿಟ್ಟ ಪರಿಣಾಮ ಈಗಾಗಲೇ ಉತ್ತರ ಕೊಟ್ಟಿದ್ದಾರೆ ಎಂದರು.
ಚಿಕ್ಕಮಗಳೂರು ಕ್ಷೇತ್ರ (Chikkamagaluru Constituency) ಕ್ಕೆ ಮಾತ್ರ ಕಾಂಗ್ರೆಸ್ ಜೊತೆಗೆ ಹೊಂದಣಿಕೆ ಇತ್ತು. ನಾನು ಜೆಡಿಎಸ್ ಪಕ್ಷದಿಂದಲೇ ಶಿಕ್ಷಣ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ. ನಾನು ಕಾಂಗ್ರೆಸ್ ಸೇರ್ಪಡೆ ಬರೀ ವದಂತಿ ಅಷ್ಟೇ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆದ ಬಳಿಕ ಅರ್ಬನ್ ನಕ್ಸಲರು ಹೊರಗೆ ಬಂದಿದ್ದಾರೆ: ಸಿಟಿ ರವಿ
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇರಬಾರದು. ಪಠ್ಯಪುಸ್ತಕ ವಿಚಾರದಲ್ಲಿ ಎಂಎಲ್ಎಗಳಿಗೆ ಏನು ಕೆಲಸ..?. ಪಠ್ಯ ಪುಸ್ತಕಗಳನ್ನು ಯಾರು ತಯಾರು ಮಾಡುತ್ತಾರೆ, ಯಾರು ಪರಿಪಕ್ವವಾಗಿದ್ದಾರೆ ಅವರಿಗೆ ಬಿಟ್ಟ ವಿಚಾರ ಎಂದು ಭೋಜೇಗೌಡ ತಿಳಿಸಿದ್ದಾರೆ.
ಸಿ.ಟಿ ರವಿ ಹೇಳಿದ್ದೇನು..?: ನಕ್ಸಲ್ ಚಟುವಟಿಕೆ ಒಡಿಶಾ ಕಡೆ ಸೀಮಿತ ಆಗಿತ್ತು. ಈಗ ಕರ್ನಾಟಕದಲ್ಲಿ ಶುರು ಮಾಡುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರು ಸಿಎಂ ಆದ ಬಳಿಕ ಅರ್ಬನ್ ನಕ್ಸಲರು ಹೊರಗೆ ಬಂದಿದ್ದಾರೆ ಎಂದು ಸಿಟಿ ರವಿ ಹೇಳಿಕೆ ನೀಡಿದ್ದರು.