ಬೆಂಗಳೂರು: ಡಿ.ಕೆ.ಶಿವಕುಮಾರ್ ವಸಿಷ್ಠರೂ ಅಲ್ಲ, ವಿಶ್ವಾಮಿತ್ರನೂ ಅಲ್ಲ. ಅವರೇನಾದರೂ ತಮ್ಮನ್ನು ಭಸ್ಮಾಸುರ ಅಂತ ಅಂದುಕೊಂಡಿದ್ದರೆ ಹೇಗೆ ಕಾಂಗ್ರೆಸ್ನವರ ತಲೆಯ ಮೇಲೆಯೇ ಕೈ ಇಡಿಸಬೇಕು ಎನ್ನುವುದು ಗೊತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ದೇವಾಲಯಗಳನ್ನು ಸ್ವಾತಂತ್ರ್ಯಗೊಳಿಸಿದರೆ ಸುಟ್ಟು ಭಸ್ಮವಾಗುತ್ತಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಅವರು, ಡಿ.ಕೆ.ಶಿವಕುಮಾರ್ ವಸಿಷ್ಠರು ಅಲ್ಲ, ವಿಶ್ವಾಮಿತ್ರನೂ ಅಲ್ಲ. ಅವರೇನಾದರೂ ತಮ್ಮನ್ನು ಭಸ್ಮಾಸುರ ಅಂತ ಅಂದುಕೊಂಡಿದ್ದರೆ, ಹೇಗೆ ಕಾಂಗ್ರೆಸ್ನವರ ತಲೆ ಮೇಲೆಯೇ ಕೈ ಇಡಿಸಬೇಕು ಎನ್ನುವುದು ನಮಗೆ ಗೊತ್ತಿದೆ. ಅವರೇ ಶಾಪಗ್ರಸ್ಥರು, ಬೇಲ್ ಮೇಲೆ ಹೊರಬಂದಿದ್ದಾರೆ. ಬೇಲ್ ಕ್ಯಾನ್ಸಲ್ ಆದರೆ ಜೈಲಿಗೆ ಹೋಗಬೇಕು. ದೇವಾಲಯ ಸಮಾಜದ ಸ್ವತ್ತು, ಅದನ್ನು ಸಮಾಜಕ್ಕೆ ವಾಪಸ್ ನೀಡುತ್ತೇನೆ ಎಂಬ ಸಿಎಂ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.
ಬಿಜೆಪಿ ತರುವ ಎಲ್ಲ ಪರಿವರ್ತನೆಗಳನ್ನು ವಿರೋಧಿಸುವ ಕಾಂಗ್ರೆಸ್ ಚಾಳಿ ಅಪಾಯಕಾರಿಯಾದದ್ದು, ಪೌರತ್ವ ವಿಧೇಯಕವನ್ನು ಕಾಂಗ್ರೆಸ್ ವಿರೋಧಿಸಿತು. ಆರ್ಟಿಕಲ್ 370 ರದ್ದತಿಗೂ ಕಾಂಗ್ರೆಸ್ ವಿರೋಧಿಸಿತ್ತು. ಹೊಸ ಶಿಕ್ಷಣ ನೀತಿಯನ್ನು ಕೂಡ ವಿರೋಧಿಸಿತ್ತು. ಕಾಲಕ್ಕೆ ತಕ್ಕಂತೆ ಬದಲಾಗಬೇಕೆಂಬ ಮನಸ್ಥಿತಿ ಕಾಂಗ್ರೆಸ್ಗೆ ಇಲ್ಲ. ಅದಕ್ಕೆ ಒಂದು ಕುಟುಂಬಕ್ಕೆ ಜೋತು ಬಿದ್ದಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಿಹಾರ್ ಸಿಎಂ ಪುತ್ರ ತನ್ನ ತಂದೆಗಿಂತಲೂ 5 ಪಟ್ಟು ಹೆಚ್ಚು ಶ್ರೀಮಂತ
ಕಾಂಗ್ರೆಸ್ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸಿತ್ತು. ಧಾರ್ಮಿಕ ಹಕ್ಕು ಸಂರಕ್ಷಣಾ ಕಾಯ್ದೆಯನ್ನು ವಿರೋಧಿಸಿತ್ತು. ಮತಾಂತರ ಆಗಬೇಕು ಅಂತ ಬಯಸುವವರಿಗೆ ನಿಯಮ ರೂಪಿಸಿದರೂ ವಿರೋಧಿಸಲು ಪ್ರಾರಂಭಿಸಿದ್ದಾರೆ. ಈಗ ದೇವಾಲಯಗಳನ್ನು ಸ್ವಾತಂತ್ರ್ಯಗೊಳಿಸಲು ಹೊರಟಿರುವುದನ್ನೂ ಕಾಂಗ್ರೆಸ್ ವಿರೋಧಿಸುತ್ತಿದೆ. ಲವ್ ಜಿಹಾದ್ಗೂ ವಿರೋಧವಿತ್ತು. ತಾಲಿಬಾನ್ ಮನಸ್ಥಿತಿ ಮತಾಂಧತೆ ಆದರೆ, ಕಾಂಗ್ರೆಸ್ಗೆ ಇರುವುದು ಮತದ ಮೇಲಿನ ಅಂಧತೆ. ಒಟ್ಟಾರೆ ತಾಲಿಬಾನ್ಗೂ ಸ್ಪರ್ಧೆ ಒಡ್ಡುವಂತೆ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾವತ್ ಇದ್ದ ಹೆಲಿಕಾಪ್ಟರ್ ಪತನದ ತನಿಖಾ ವರದಿ ಮುಂದಿನ ವಾರ ಸಲ್ಲಿಕೆ?