ಚಿಕ್ಕಬಳ್ಳಾಪುರ: ಗಾಂಧೀಜಿಯವರ ಟೋಪಿಯನ್ನು ಹಾಕಿಕೊಂಡ ಕಾಂಗ್ರೆಸ್ ಪಕ್ಷ ಉಳಿದವರಿಗೆ ಟೋಪಿ ಹಾಕುವ ಕೆಲಸ ಮಾಡಿತು. ಗಾಂಧಿ ತತ್ವವನ್ನ ಬಿಟ್ಟು ಬಿಡ್ತು. ಗೋಡ್ಸೆ ಕೊಂದಿದ್ದು ಗಾಂಧಿ ದೇಹವನ್ನ ಮಾತ್ರ. ಆದರೆ ಕಾಂಗ್ರೆಸ್ ಕೊಂದಿದ್ದು ಗಾಂಧಿ ತತ್ವಗಳನ್ನು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.
ಜಿಲ್ಲೆಯ ಗೌರಿಬಿದನೂರು ವಿದುರಾಶ್ವತ್ಥ ಗ್ರಾಮದಲ್ಲಿ ಮಾತನಾಡಿದ ಸಿ.ಟಿ.ರವಿ, ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಸವಿ ನೆನೆಪಿನಾರ್ಥಕವಾಗಿ ‘ಗಾಂಧಿ ತತ್ವದ ಎಡೆಗೆ, ನಮ್ಮ ನಡಿಗೆ’ ಅನ್ನೋ ಜನಜಾಗೃತಿ ಪಾದಯಾತ್ರೆ ನಡೆಸಿದ್ದೇವೆ. ಸ್ವತಂತ್ರ ಹೋರಾಟದ ತಪೋಭೂಮಿಯಾದ ವಿದುರಾಶ್ವತ್ಥ ಗ್ರಾಮದಿಂದ ಪಾದಯಾತ್ರೆ ಆರಂಭಿಸುತ್ತಿದ್ದೇವೆ. ನಮ್ಮ ನಡಿಗೆ ಗಾಂಧಿ ತತ್ವಗಳ ಕಡೆಗೆ ಎಂದು ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದ ವಿಪಕ್ಷ ನಾಯಕನ ಆಯ್ಕೆ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿರುವ ರವಿ ಅವರು, ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರನ್ನ ಒಗ್ಗೂಡಿಸುವಂತಹ ನಾಯಕರೂ ಯಾರೂ ಇಲ್ಲ. ಸಿದ್ದರಾಮಯ್ಯ ಸಹ ಕೇವಲ ಒಂದು ಗುಂಪಿನ ನಾಯಕರಷ್ಟೇ. ಹೀಗೆ ಕಾಂಗ್ರೆಸ್ನಲ್ಲಿ ಹಲವು ಗುಂಪುಗಳಿದ್ದು. ಹಲವು ಮಂದಿ ನಾಯಕರಿದ್ದಾರೆ. ಇಡೀ ಕಾಂಗ್ರೆಸ್ ಪಕ್ಷ ಒಪ್ಪಿಕೊಳ್ಳುವಂತಹ ಏಕೈಕ ನಾಯಕ ಸದ್ಯಕ್ಕೆ ಕರ್ನಾಟಕದಲ್ಲಿ ಯಾರೂ ಇಲ್ಲ ಎಂದು ವ್ಯಂಗ್ಯವಾಡಿದರು.